ಮಂಜೇಶ್ವರ : ಹೆಜಮಾಡಿ ಟೋಲ್ ಪ್ಲಾಜಾ ಸುದ್ದಿಯಾದ ಬಳಿಕ ಇದೀಗ ತಲಪಾಡಿ ಟೋಲ್ ಗೇಟ್ ಸುದ್ದಿಯಾಗುತ್ತಿದೆ. ಇಬ್ಬಗೆಯ ನೀತಿಯ ವಿರುದ್ಧ ನ್ಯಾಯ ದೊರಕಿಸಿಕೊಡುವಂತೆ ಮಂಜೇಶ್ವರದ ಜನತೆ ಅದೆಷ್ಟೋ ಮನವಿಯನ್ನು ಸಲ್ಲಿಸಿ ಹಲವು ಪ್ರತಿಭಟನೆಗಳನ್ನು ನಡೆಸಿದ್ದರೂ ಟೋಲ್ ಬೂತ್ ನಿರ್ವಾಹಕರ ನಡುವೆ ಘರ್ಷಣೆಗಳು ಆಗಾಗ್ಗೆ ಸಂಭವಿಸುತ್ತಲೇ ಇದೆ ಹೊರತು ಯಾವುದೇ ಪರಿಹಾರ ಕಾಣಲು ಸಾಧ್ಯವಾಗಿರಲಿಲ್ಲ.
ತಲಪಾಡಿ ಗ್ರಾಮ ಪಂಚಾಯತಿಗೊಳಪಟ್ಟ ವಾಹನಗಳಿಗೆ ಉಚಿತ ಸಂಚಾರಕ್ಕೆ ಅನುವು ಮಾಡಿ ಕೊಟ್ಟ ಟೋಲ್ ಗೇಟ್ ನಿರ್ವಾಹಕರು ಮಂಜೇಶ್ವರ ಗ್ರಾಮ ಪಂಚಾಯತಿಗೊಳಪಟ್ಟವರಿಗೆ ಶುಲ್ಕವನ್ನು ವಿಧಿಸುತ್ತಿರುವುದು ಎಲ್ಲಿಯ ನ್ಯಾಯ...? ಎಂಬುದು ಇಲ್ಲಿಯ ಗ್ರಾಮಸ್ಕರ ಪ್ರಶ್ನೆ...
ಈ ಅನ್ಯಾಯವನ್ನು ವಿರೋಧಿಸಿದ ಗ್ರಾಮಸ್ಥರು ಇದೀಗ ಮಂಜೇಶ್ವರ ಗ್ರಾಮ ಪಂಚಾಯತಿ ಅಧೀನದಲ್ಲಿರುವ ತಲಪಾಡಿ ಮರಿಯಾಶ್ರಮ ಚರ್ಚ್ ನ ಹಿಂಭಾಗದಲ್ಲಿರುವ ಹಳೆಯ ರಾಷ್ಟ್ರೀಯ ಹೆದ್ದಾರಿ ಮೂಲಕ ಸೇತುವೆಯನ್ನು ನಿರ್ಮಿಸಿ ಸಂಚಾರಕ್ಕೆ ವ್ಯವಸ್ಥೆಯನ್ನು ಕಲ್ಪಿಸಲು ಮುಂದಾಗಿದ್ದಾರೆ.
ಕೋವಿಡ್ ಕಾಲದಲ್ಲಿ ಈ ವಿಷಯ ಚರ್ಚೆಯಾಗಿದ್ದರೂ ಬಳಿಕ ಅದು ನೆನೆಗುದಿಗೆ ಬಿದ್ದಿತ್ತು. ಆದರೆ ಇದೀಗ ಈ ನೂತನ ದಾರಿ ವ್ಯವಸ್ಥೆಯ ಮೊದಲ ಹಂತವಾಗಿ ಮಂಜೇಶ್ವರ ಗ್ರಾಮ ಪಂಚಾಯತಿಯ ನೇತೃತ್ವದಲ್ಲಿ ಗ್ರಾಮಾಧಿಕಾರಿ ಹಾಗೂ ಸರ್ವೇ ನಡೆಸುವವರು ಆಗಮಿಸಿ ಸ್ಥಳ ಮಂಜೇಶ್ವರ ಗ್ರಾಮ ಪಂಚಾಯತಿ ಅಧೀನದಲ್ಲಿರುವುದನ್ನು ಖಚಿತಪಡಿಸಿಕೊಂಡರು. ಹೊಳೆಯಿಂದಾಚೆ 40 ಮೀಟರ್ ಪಂಚಾಯತಿ ಅಧೀನದಲ್ಲಿರುವುದಾಗಿ ಗ್ರಾಮಾಧಿಕಾರಿಯ ಪ್ರಾಥಮಿಕ ಮಾಹಿತಿ.
ಇನ್ನು ಇದರ ಮುಂದುವರಿದ ಭಾಗವಾಗಿ ಸೇತುವೆ ನಿರ್ಮಿಸಲು ಬೇಕಾಗುವ ಯೋಜನಾ ವೆಚ್ಚ ವ್ಯವಸ್ಥೆ ಮಾಡಿ ಮಂಜೇಶ್ವರ ಗ್ರಾಮದ ಜನತೆಗೆ ಮುಂದಿನ ವರ್ಷದಲ್ಲಿ ಟೋಲ್ ಗೇಟ್ ಬೈ ಪಾಸ್ ರಸ್ತೆ ನಿರ್ಮಾಣವಾಗಲಿರುವುದಾಗಿ ಪಂ.ಅಧ್ಯಕ್ಷೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಈ ಸಂದರ್ಭ ಟೋಲ್ ಗೇಟ್ ಹೋರಾಟ ಸಮಿತಿ ಪದಾಧಿಕಾರಿಗಳು, ವಾರ್ಡ್ ಸದಸ್ಯರು ಊರವರು ಸೇರಿದಂತೆ ಹಲವಾರು ಮಂದಿ ಜೊತೆಗಿದ್ದರು.

.jpg)

