ಕಾಸರಗೋಡು: ಕೇರಳದಲ್ಲಿ ಬಿ.ಜೆ.ಪಿ. ರಾಜಕೀಯ ನಿರ್ಣಾಯಕ ಶಕ್ತಿಯಾಗಿ ಬೆಳೆದುಬರುತ್ತಿದ್ದು, ಇದು ಪ್ರತಿಪಕ್ಷಗಳಲ್ಲಿ ಕಂಪನ ಸೃಷ್ಟಿಸಿರುವುದಾಗಿ ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ತಿಳಿಸಿದ್ದಾರೆ. ಅವರು ಬಿಜೆಪಿ ನೀಲೇಶ್ವರ ಮಂಡಲದ ಪುಞಂಚಾಲ್ ವಲಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಕಮ್ಯೂನಿಸ್ಟ್ ಕೋಟೆಗಳಲ್ಲಿ ಪಡೆದಿರುವ ಮತಗಳ ಮುನ್ನಡೆ, ಮುಂಬರುವ ಸ್ಥಳೀಯಾಡಳಿತ ಚುನಾವಣೇಯಲ್ಲೂ ಪ್ರತಿಫಲಿಸಲಿವೆ. ಮೂರನೇ ನರೇಂದ್ರಮೋದಿ ಸರ್ಕಾರದ ಯೋಜನೆ, ಪ್ರಯೋಜನಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಪಕ್ಷದ ಕಾರ್ಯಕರ್ತರು ಪ್ರಾಮಾಣಿಕವಾಗಿ ದುಡಿಯಬೇಕಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಪಕ್ಷದ ಭವಿಷ್ಯ ಉತ್ಸಾಹಿ ಯುವ ಕಾರ್ಯಕರ್ತರ ಕೈಯಲ್ಲಿದೆ. ಕೇರಳದಲ್ಲಿ ಎಲ್ಲೆಡೆ ಪಕ್ಷ ಕಾಣುತ್ತಿರುವ ಜನ ಬೆಂಬಲದ ಮುನ್ನಡೆ ಕಾಸರಗೋಡಿನಲ್ಲೂ ಪ್ರತಿಫಲಿಸಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಪಕ್ಷದ ಹಿರಿಯ ಕಾರ್ಯಕರ್ತರನ್ನು ಗೌರವಿಸಲಾಯಿತು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ನ 119ನೇ ಸಂಚಿಕೆ ಯನ್ನು ಸಾರ್ವಜನಿಕವಾಗಿ ಪ್ರಸಾರ ಮಾಡಿ, ಆಲಿಸಲಾಯಿತು. ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿದ ವಿವಿಧ ಕಲ್ಯಾಣ ಯೋಜನೆಗಳ ಕುರಿತು ಮುಳಿಯಾರು ಮಂಡಲ ಮಾಜಿ ಅಧ್ಯಕ್ಷ ಮಹೇಶ್ ಗೋಪಾಲ್ ಮಹಿತಿ ನೀಡಿದರು.
ಬಿಜೆಪಿ ವೆಸ್ಟ್ ಎಳೇರಿ ಪಂಚಾಯತ್ ಘಟಕ ಅಧ್ಯಕ್ಷ ಸುರೇಶ್ ಕಮ್ಮಾಡಂ ಅಧ್ಯಕ್ಷತೆ ವಹಿಸಿದರು. ಪಕ್ಷದ ಪದಾಧಿಕಾರಿಗಳಾದ ಸಾಗರ್ ಚಾತಯತ್ತ್, ಎ.ಕೆ.ಚಂದ್ರನ್, ರಾಜೀವನ್, ಸಿ.ವಿ.ಸುರೇಶ್, ಜಯಕುಮಾರ್ ಮಾನಡ್ಕ, ಟಿ.ಸಿ. ರಾಮಚಂದ್ರನ್ ಮೊದಲಾದವರು ಉಪಸ್ಥಿತರಿದ್ದರು.
ಪುಞಂಚಾಲ್ ವಲಯಾಧ್ಯಕ್ಷ ಸುರೇಶ್ ಕುಮಾರ್ ಸ್ವಾಗತಿಸಿದರು. ವೆಸ್ಟ್ ಏಳೇರಿ ಪಂಚಾಯತ್ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ವಂದಿಸಿದರು.






