ಮುಳ್ಳೇರಿಯ: ಕೊಳತ್ತೂರು ಬಳಿ ಬೋನಿನಲ್ಲಿ ಸೆರೆಹಿಡಿಯಲಾದ ಹುಲಿಯನ್ನು ಬೆಳ್ಳೂರು-ಎಣ್ಮಕಜೆ ಪಂಚಾಯಿತಿ ಗಡಿಪ್ರದೇಶದ ಬಂಟಾಜೆ ಅರಣ್ಯದಲ್ಲಿ ಬಿಟ್ಟಿರುವುದು ಇಲ್ಲಿನ ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದ್ದು, ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಎಣ್ಮಕಜೆ ಗ್ರಾಪಂ ಅಧ್ಯಕ್ಷ ಜೆ.ಎಸ್ ಸೋಮಶೇಖರ್ ನೇತೃತ್ವದ ಜನಪ್ರತಿನಿಧೀಗಳು ಹಾಗೂ ನಾಗರಿಕರ ತಂಡ ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದೆ.
ಚಿರತೆ ಭೀತಿಯಿಂದ ಎಣ್ಮಕಜೆ ಪಂಚಾಯಿತಿಯ ವಾಣಿನಗರ ಶಾಲೆಗೆ ತೆರಳುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಮಂಗಳವಾರದಂದು 18 ಮಂದಿ ವಿದ್ಯಾರ್ಥಿಗಳು ಗೈರುಹಾಜರಾಗಿದ್ದು, ವಿದ್ಯಾರ್ಥಿಗಳ ಹೆತ್ತವರು ಜನಪ್ರತಿನಿಧಿಗಳನ್ನು, ಸಮಾಜಸೇವಕರನ್ನು ಸಂಪರ್ಕಿಸಿ ತಮ್ಮ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮಶೇಖರ್ ಜೆ.ಎಸ್, ಗ್ರಾಪಂ ಸದಸ್ಯ ನರಸಿಂಹ ಪೂಜಾರಿ ಸೇರಿದಂತೆ ಸ್ಥಳೀಯರು ವಾಣೀನಗರದಲ್ಲಿ ಇಲ್ಲಿನ ಸೆಕ್ಷನ್ ಫಾರೆಸ್ಟ್ ಅಧಿಕಾರಿಗಳನ್ನು ಭೇಟಿಮಾಡಿ ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟಿದ್ದಾರೆ. ಸೆಕ್ಷನ್ ಫಾರೆಸ್ಟ್ ಆಫೀಸರ್ ವಿನೋದ್ ಕುಮಾರ್ ಜತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಜೆ.ಎಸ್ ಸೋಮಶೇಖರ್ ಅವರು ಮಾತುಕತೆ ನಡೆಸಿದರು.
ಎಣ್ಮಕಜೆ, ಬೆಳ್ಳೂರು ಹಾಗೂ ಪಾಣಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಜನಪ್ರತಿನಿಧಿಗಳ ಸಭೆ ತಕ್ಷಣ ಆಯೋಜಿಸಿ, ಇದಕ್ಕೆ ಎರಡೂ ವಿಧಾನಸಭಾ ಕ್ಷೇತ್ರಗಳ ಶಾಸಕರನ್ನೂ ಆಹ್ವಾನಿಸುವಂತೆ ಸೋಮಶೇಖರ್ ಜೆ.ಎಸ್.ಒತ್ತಾಯಿಸಿದ್ದಾರೆ. ಚಿರತೆಯನ್ನು ಬಿಟ್ಟ ಸ್ಥಳ ಹಾಗೂ ಪರಿಸರದಲ್ಲಿ ಎಚ್ಚರಿಕೆ ಫಲಕ ಅಳವಡಿಸಬೇಕು, ಹೆಚ್ಚಿನ ಸಂಖ್ಯೆಯಲ್ಲಿ ಸಶಸ್ತ್ರಧಾರಿ ಸಿಬ್ಬಂದಿಯನ್ನು ನೇಮಿಸಬೇಕು, ಚಿರತೆಯನ್ನು ಸೆರೆಹಿಡಿಯಲು ಬೋನು ಸ್ಥಾಪಿಸಬೇಕು ಎಂದು ಒತ್ತಾಯಿಸಲಾಯಿತು. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ನೀಡಿ ಅಗತ್ಯದ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.






