ಕಾಸರಗೋಡು: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಪೈವಳಿಕೆ ಮಂಡೆಕಾಪುವಿನಿಂದ ನಾಪತ್ತೆಯಾಗಿ, ನಂತರ ಬಾಲಕಿ ಹಾಗೂ ಆಟೋಚಾಲಕ ನೇಣುಬಿಗಿದು ಆತ್ಮಹತ್ಯೆಗೈದಿರುವ ಪ್ರಕರಣದ ಬಗ್ಗೆ ಸಮಗ್ರ ವರದಿ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟು ಆದೇಶಿಸಿದೆ. ಕೇಸ್ ಡೈರಿ ಸಹಿತ ತನಿಖಾ ಅಧಿಕಾರಿ ಮಂಗಳವಾರ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿದ್ದ ಸಂದರ್ಭ ಜಸ್ಟಿಸ್ಗಳಾದ ದೇವನ್ ರಾಮಚಂದ್ರನ್ ಹಾಗೂ ಎಂ.ಬಿ ಸ್ನೇಹಲತಾ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಅದೇಶ ನೀಡಿದೆ. ಪ್ರಕರಣವನ್ನು ಕೇವಲ ಆತ್ಮಹತ್ಯೆ ಎಂದು ನಿರ್ಲಕ್ಷಿಸುವಂತಿಲ್ಲ. ಕೊಲೆ ಸಾಧ್ಯತೆ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕಾಗಿದೆ. ಆದರೆ ತನಿಖೆಯಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಎಂದೂ ನ್ಯಾಯಾಲಯ ತಿಳಿಸಿದೆ.
ಬಾಲಕಿ ನಾಪತ್ತೆಯಾಗಿರುವ ಬಗ್ಗೆ ತಾಯಿ ಸಲ್ಲಿಸಿರುವ ದೂರು ಹಾಗೂ ನಂತರ ಪೊಲೀಸರು ಕೈಗೊಂಡಿರುವ ಕ್ರಮಗಳ ಬಗ್ಗೆ ಸಮಗ್ರ ಮಾಹಿತಿಯನ್ನು ತನಿಖಾಧಿಕಾರಿಯಿಂದ ಕೇಳಿ ತಿಳಿದುಕೊಂಡ ನ್ಯಾಯಾಲಯ, ಇದರ ಕೇಸ್ ಫೈಲನ್ನು ತರಿಸಿಕೊಂಡು ನ್ಯಾಯಾಧೀಶರು ಪರಿಶೋಧಿಸಿದರು.
ಬಾಲಕಿಗೆ 15ವರ್ಷ ಪ್ರಾಯ ಮಾತ್ರ ಹೊಂದಿರುವ ಕಾರಣ ನಾಪತ್ತೆಯಾದ ತಕ್ಷಣದಿಂದ ಪೋಕ್ಸೋ ಅನ್ವಯ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸಬೇಕಾಗಿತ್ತು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. 18ವಯಸ್ಸಿಗಿಂತ ಕೆಳಗಿನ ಬಾಲಕಿ ಅಥವಾ ಬಾಲಕರ ವಿಚಾರದಲ್ಲಿ ಪೊಲೀಸರು ಪೋಕ್ಸೋ ವಿಚಾರವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇಂತಹ ಪ್ರಕರಣಗಳಲ್ಲಿ ಎಂದಿಗೂ ವಿಳಂಬ ಹಾಗೂ ನಿರ್ಲಕ್ಷ್ಯ ಧೋರನೆ ಸಲ್ಲದು. ಬಾಲಕಿ ನಾಪತ್ತೆಯಾದ ಏಳು ದಿವಸಗಳ ನಂತರ ಯಾಕೆ ಶ್ವಾನದಳವನ್ನು ಕರೆಸಲಾಗಿದೆ ಎಂಬ ಬಗ್ಗೆಯೂ ನ್ಯಾಯಾಲಯ ಪ್ರಶ್ನಿಸಿದೆ.
ಬಾಲಕಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ತಾಯಿ ಮಗಳನ್ನು ಪತ್ತೆ ಹಚ್ಚಿ ಕೊಡುವಂತೆ ಹೈಕೋರ್ಟಿಗೆ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆಗೆ ಸಂಬಂಧಿಸಿ ನ್ಯಾಯಾಲಯ ಈ ಅಭಿವ್ರಾಯ ವ್ಯಕ್ತಪಡಿಸಿದೆ. ಫೆಬ್ರವರಿ 11 ರಂದು ರಾತ್ರಿ ಬಾಲಕಿ ಆಹಾರ ಸೇವಿಸಿ ಮಲಗಿದ್ದು, 12ರಂದು ಬೆಳಗ್ಗೆ ನೋಡುವಾಗ ನಾಪತ್ತೆಯಾಗಿದ್ದಳು. ಅದೇ ದಿನ ನೆರೆಮನೆ ನಿವಾಸಿ ಪ್ರದೀಪನೂ ನಾಪತ್ತೆಯಾಗಿದ್ದು, 26ದಿಸಗಳ ನಂತರ ಇಬ್ಬರ ಮೃತದೇಹ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.





