ನವದೆಹಲಿ: ಮೋಟಾರು ವಾಹನ ಅಪಘಾತಗಳಲ್ಲಿ ಗಾಯಗೊಂಡವರು ನಗದುರಹಿತವಾಗಿ ಚಿಕಿತ್ಸೆ ಪಡೆಯಲು ಅಗತ್ಯವಿರುವ ಯೋಜನೆಯನ್ನು ರೂಪಿಸುವಲ್ಲಿ ವಿಳಂಬ ಧೋರಣೆ ಪ್ರದರ್ಶಿಸಿದ್ದಕ್ಕಾಗಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್, ವಿಳಂಬಕ್ಕೆ ವಿವರಣೆ ನೀಡಲು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯದ ಕಾರ್ಯದರ್ಶಿಯನ್ನು ಬರಹೇಳಿದೆ.
ಜನವರಿ 8ರಂದು ಕೋರ್ಟ್ ಆದೇಶ ನೀಡಿದ್ದರೂ ಕೇಂದ್ರ ಸರ್ಕಾರವು ಅದನ್ನು ಪಾಲಿಸಿಲ್ಲ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕ ಮತ್ತು ಉಜ್ವಲ್ ಭೂಯಾನ್ ಅವರು ಇರುವ ವಿಭಾಗೀಯ ಪೀಠವು ಆಕ್ಷೇಪ ವ್ಯಕ್ತಪಡಿಸಿತು.
'ಕೊಡಲಾಗಿದ್ದ ಸಮಯವು ಮಾರ್ಚ್ 15ಕ್ಕೆ ಕೊನೆಗೊಂಡಿದೆ. ಇದು ಈ ನ್ಯಾಯಾಲಯದ ಆದೇಶದ ಗಂಭೀರ ಉಲ್ಲಂಘನೆಯಷ್ಟೇ ಅಲ್ಲ, ಇದು ಬಹಳ ಉಪಯುಕ್ತವಾದ ಕಾನೂನಿನ ಅನುಷ್ಠಾನದಲ್ಲಿನ ಲೋಪವೂ ಹೌದು' ಎಂದು ಪೀಠವು ಹೇಳಿದೆ. ರಸ್ತೆ ಸಾರಿಗೆ ಸಚಿವಾಲಯದ ಕಾರ್ಯದರ್ಶಿಯು ಏಪ್ರಿಲ್ 28ರಂದು ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದಲ್ಲಿ ಹಾಜರಿರಬೇಕು ಎಂದು ಅದು ಸೂಚಿಸಿದೆ.
ಅನುಷ್ಠಾನದ ವಿಚಾರವಾಗಿ ಕೆಲವು ಅಡ್ಡಿಗಳು ಇವೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ವಿಕ್ರಮಜೀತ್ ಬ್ಯಾನರ್ಜಿ ಅವರು ಪೀಠಕ್ಕೆ ಮಾಹಿತಿ ನೀಡಿದರು. 'ಇದು ನೀವೇ ರೂಪಿಸಿದ ಶಾಸನ. ನಗದುರಹಿತ ಚಿಕಿತ್ಸೆಯ ಸೌಲಭ್ಯ ಇಲ್ಲವಾಗಿರುವ ಕಾರಣಕ್ಕೆ ಜನ ಜೀವ ಕಳೆದುಕೊಳ್ಳುತ್ತಿದ್ದಾರೆ... ಜನಸಾಮಾನ್ಯರ ಅನುಕೂಲಕ್ಕಾಗಿ ಇದನ್ನು ರೂಪಿಸಲಾಗಿದೆ. ನಾವು ನ್ಯಾಯಾಂಗ ನಿಂದನೆ ಕಾನೂನಿನ ಅಡಿ ಕ್ರಮ ಕೈಗೊಳ್ಳುತ್ತೇವೆ. ಕಾರ್ಯದರ್ಶಿಯವರಿಗೆ ವಿವರಣೆ ನೀಡಲು ಹೇಳಿ' ಎಂದು ಪೀಠವು ತಾಕೀತು ಮಾಡಿತು.
ಅಪಘಾತ ಸಂಭವಿಸಿದ ನಂತರ ಒಂದು ತಾಸಿನ ಒಳಗೆ (ಗೋಲ್ಡನ್ ಅವರ್) ಗಾಯಾಳುಗಳಿಗೆ ನಗದು ರಹಿತವಾಗಿ ಚಿಕಿತ್ಸೆ ಒದಗಿಸಲು ಅಗತ್ಯವಿರುವ ಯೋಜನೆಯನ್ನು ಸಿದ್ಧಪಡಿಸುವಂತೆ ಕೋರ್ಟ್ ಜನವರಿ 8ರಂದು ಹೇಳಿತ್ತು. ಯೋಜನೆಯ ವಿವರವನ್ನು ಮಾರ್ಚ್ 14ಕ್ಕೆ ಮೊದಲು ಸಲ್ಲಿಸಬೇಕು ಎಂದು ಸೂಚಿಸಿತ್ತು.




