HEALTH TIPS

ದುಬೆ ಹೇಳಿಕೆ ವಿಡಿಯೊ ತೆಗೆಸಲು ಕೋರಿದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ

ನವದೆಹಲಿ: ಸುಪ್ರೀಂ ಕೋರ್ಟ್ ಮತ್ತು ಮುಖ್ಯ ನ್ಯಾಯಮೂರ್ತಿ ಅವರನ್ನು ಟೀಕಿಸಿರುವ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರ ಹೇಳಿಕೆಗಳ ವಿಡಿಯೊಗಳನ್ನು ಜಾಲತಾಣಗಳಿಂದ ತೆಗೆಸಲು ನಿರ್ದೇಶಿಸಬೇಕು ಎಂದು ಕೋರಿರುವ ವಿವಿಧ ಅರ್ಜಿಗಳನ್ನು ವಿಚಾರಣೆಗೆ ಪರಿಗಣಿಸಲು ಸುಪ್ರೀಂ ಕೋರ್ಟ್ ಮಂಗಳವಾರ ಸಮ್ಮತಿಸಿತು.

ಈ ಎಲ್ಲ ಅರ್ಜಿಗಳನ್ನು ತುರ್ತು ವಿಚಾರಣೆಗೆ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಆಗಸ್ಟೀನ್‌ ಜಾರ್ಜ್ ಮಾಸೀಹ್ ಅವರಿದ್ದ ಪೀಠಕ್ಕೆ ಒಪ್ಪಿಸಲಾಗಿದೆ.

'ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ನಾಗರಿಕ ಯುದ್ಧಕ್ಕೆ ಮುಖ್ಯ ನ್ಯಾಯಮೂರ್ತಿ ಅವರೇ ಕಾರಣ' ಎಂದು ದುಬೆ ಹೇಳಿದ್ದಾರೆ. ಇವರ ಹೇಳಿಕೆ ಬಳಿಕ ಜಾಲತಾಣಗಳಲ್ಲಿ ಸುಪ್ರೀಂ ಕೋರ್ಟ್‌ ನಿಂದಿಸುವ ನುಡಿಗಳು ಹೆಚ್ಚಾಗಿ ಹಂಚಿಕೆ ಆಗುತ್ತಿವೆ. ಇದು, ಗಂಭೀರವಾದ ವಿಷಯ' ಎಂದು ಅರ್ಜಿದಾರರ ಪರ ವಕೀಲರು ಪ್ರತಿಪಾದಿಸಿದರು.

'ನಿಮ್ಮ ತಕರಾರು ಏನಿದೆ? ನಿಂದನೆ ಅರ್ಜಿಯನ್ನು ಸಲ್ಲಿಸಲು ಬಯಸುವಿರಾ' ಎಂದು ನ್ಯಾಯಮೂರ್ತಿ ಗವಾಯಿ ವಕೀಲರನ್ನು ಪ್ರಶ್ನಿಸಿದರು.

'ಈಗಾಗಲೇ ಅರ್ಜಿ ಸಲ್ಲಿಸಲಾಗಿದೆ. ಸಂಸದ ದುಬೆ ವಿರುದ್ಧ ಸರ್ಕಾರ ಯಾವುದೇ ಕ್ರಮ ವಹಿಸುತ್ತಿಲ್ಲ. ದುಬೆ ವಿರುದ್ಧ ನಿಂದನೆ ಮೊಕದ್ದಮೆ ದಾಖಲಿಸಲು ಸಮ್ಮತಿ ಕೋರಿ ಸಹೊದ್ಯೋಗಿ ವಕೀಲರೊಬ್ಬರು ಅಟಾರ್ನಿ ಜನರಲ್‌ ಅವರಿಗೂ ಪತ್ರ ಬರೆದಿದ್ದಾರೆ. ಯಾವುದೇ ಪ್ರತಿಕ್ರಿಯೆ ಬಂದಿಲ್ಲ' ಎಂದು ವಕೀಲರು ತಿಳಿಸಿದರು.

'ಪ್ರಸ್ತುತ, ದುಬೆ ಹೇಳಿಕೆಗಳನ್ನು ಒಳಗೊಂಡ ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಿಂದಲಾದರೂ ತೆಗೆಸಲು ಸೂಚನೆ ನೀಡಬೇಕು' ಎಂದು ವಕೀಲರು ಕೋರಿದರು. ಅರ್ಜಿಗಳು ಮುಂದಿನ ವಾರ ವಿಚಾರಣೆಗೆ ಬರಲಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries