ಮಧೂರು: ದೈವೇಚ್ಚೆಯಂತೆ ಕಾರ್ಯಗಳು ನಡೆಯುತ್ತದೆ. ಮನುಷ್ಯ ಪ್ರಯತ್ನ ಧರ್ಮ ಸಾಧನೆಯಲ್ಲಿ ಮಾತ್ರ. ಭಗವಂತ ಕೊಟ್ಟಂತೆ ಸ್ವೀಕರಿಸಬೇಕು. ಈ ಹಿನ್ನೆಲೆಯಲ್ಲಿ ಮಧೂರಿನಲ್ಲಿ ಅಷ್ಟಬಂಧ ಬ್ರಹ್ಮಕಲಶ-ಮೂಡಪ್ಪ ಸೇವೆ ಸುಧೀರ್ಘ ಕಾಲದ ಬಳಿಕ ನಡೆಯುತ್ತಿರುವುದು ಈ ಕಾಲದ ಪುಣ್ಯ ಎಂದು ವಜ್ರದೇಹಿ ಮಠದ ಶ್ರೀರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನದಲ್ಲಿ ತಿಳಿಸಿದರು.
ಮಧೂರು ಶ್ರೀಮದನಂತೇಶ್ವರ ಸಿದ್ದಿವಿನಾಯಕ ದೇವಾಲಯದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶ-ಮೂಡಪ್ಪ ಸೇವೆಯ ಅಂಗವಾಗಿ ಗುರುವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ನಮ್ಮ ಸಮಾಜ ವಿಭಿನ್ನವಾಗಿದ್ದು, ಹಲವು ಆಯಾಮ, ಚಿಂತನೆಗಳಿರುವುದೇ ಇದಕ್ಕೆ ಕಾರಣ. ಅನಂತ ಕೋಟಿ ದೇವರನ್ನು ಮುಂದಿರಿಸಿ ಏಕತೆಯನ್ನು ಹೇಗೆ ತರುವುದೆಂಬುದು ಮುಖ್ಯವಾಗುತ್ತದೆ. ವಿವಿಧತೆಯಲ್ಲಿ ಏಕತೆಯನ್ನು ನಾವು ಕಂಡುಕೊಳ್ಳಬೇಕು. ಮನುಷ್ಯ ಕಾಲ, ಕಾಮದ ವ್ಯವಸ್ಥೆಯಲ್ಲಿ ಪ್ರಭಾವಿತರಾಗಿರುವುದರಿಂದ ಕರ್ಮವನ್ನು ಅನುಸರಿಸಬೇಕು ಎಂದವರು ತಿಳಿಸಿದರು..
ಮಾಣಿಲ ಶ್ರೀಧಾಮದ ಮೋಹಮನದಾಸ ಪರಮಹಂಸ ಸ್ವಾಮೀಜಿ ಉಪಸ್ಥಿತರಿದ್ದು ಆಶೀರ್ವಚನ ನೀಡಿದರು.
ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಡಾ.ಅನಂತ ಕಾಮತ್.ಕಾಸರಗೋಡು ಅಧ್ಯಕ್ಷತೆ ವಹಿಸಿದ್ದರು.
ಹಿಂದೂ ಹಿತ ಸಂರಕ್ಷಣಾ ಸಮಿತಿಯ ವಿ.ಜಿ.ತಂಬಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಉಪನ್ಯಾಸ ನೀಡಿ, ಧರ್ಮಕ್ಷೇತ್ರಗಳು ನಮ್ಮ ಕ್ಷಯವನ್ನು ದೂರೀಕರಿಸುವ ಕೇಂದ್ರಗಳಾಗಿವೆ. ಉಪವಾಸವೆಂದರೆ ಕೇವಲ ಆಹಾರ ನಿಯಂತ್ರಣವಲ್ಲ. ಭಗವಂತನ ಸಮೀಪಕ್ಕೆ ಸಾಗುವುದಾಗಿದೆ. ಮನಸ್ಸಿಗೆ ಶಕ್ತಿ ನೀಡುವ ಕ್ಷೇತ್ರ ಪರಂಪರೆಯನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ನಿರ್ವಹಿಸುವ ಅಗತ್ಯ ನಮಗಿದೆ.ಚೈತನ್ಯ ಆಹಾಹನೆಗೊಂಡ ಮೂರ್ತಿಗಳು ನಮ್ಮ ಧೀಶಕ್ತಿಯನ್ನು ಉದ್ಧೀಪಿಸುತ್ತದೆ. ದಿನನಿತ್ಯ ಮನೆಯ ದೀಪಾರಾಧನೆ, ಪಾರಾಯಣ , ಕ್ಷೇತ್ರದರ್ಶನಗಳೇ ನಮ್ಮನ್ನು ನಾವಾಗಿಸುತ್ತದೆ ಎಂದರು.
ಕಟೀಲು ಶ್ರೀಕ್ಷೇತ್ರದ ಆನುವಂಶಿಕ ಅರ್ಚಕ ಹರಿನಾರಾಯಣ ದಾಸ ಅಸ್ರಣ್ಣ ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಬಂಗಾರ ಅರಸರು ವಿಟ್ಲ, ಕುದ್ರೆಪ್ಪಾಡಿ ಸುಬ್ರಹ್ಮಣ್ಯ ದೇವಸ್ಥಾನ ರಾಮಚಂದ್ರ ಪೆÉಜತ್ತಾಯರು, ಮಧೂರು ಗ್ರಾಮ ಪಂ.ಸದಸ್ಯ ಉದಯ ಕುಮಾರ್ ಸಿಎಚ್,ಗೋಪಾಲಕೃಷ್ಣ ಭಟ್ ಮಧೂರು, ನ್ಯಾಯವಾದಿ .ಎಸ್.ಎನ್.ಧನರಾಜ್, ಕಾರ್ತಿಕ್ ಶೆಟ್ಟಿ ಉಪಸ್ಥಿತರಿದ್ದು ಮಾತನಾಡಿದರು. ಸವಿತಾ ರಾಜೇಶ್ ಕಲ್ಲೂರಾಯ ಪ್ರಾರ್ಥನೆಗೈದರು. ಎಸ್ ಎನ್ ಶರ್ಮ ಅಳಕೆ ಸ್ವಾಗತಿಸಿ, ಅಶೋಕ ರೈ ಮಾಯಿಪ್ಪಾಡಿ ಗುತ್ತು ವಂದಿಸಿದರು. ಮಹಾಬಲ ರೈ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು.




.jpg)
.jpg)
