ಪುಣೆ: ಹದಿನೇಳು ಮಹಿಳಾ ಕೆಡೆಟ್ಗಳು ಇದೇ ಮೊದಲ ಬಾರಿಗೆ ಪುಣೆಯ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಿಂದ (ಎನ್ಡಿಎ) ಶುಕ್ರವಾರ ತರಬೇತಿ ಪಡೆಯುವ ಮೂಲಕ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದರು.
ಅಕಾಡೆಮಿಯಲ್ಲಿ ಶುಕ್ರವಾರ ನಡೆದ ತರಬೇತಿ ಅಂಗವಾಗಿ ನಡೆದ ಅಂತಿಮ ಪರೇಡ್ನಲ್ಲಿ ಪುರುಷರೂ ಸೇರಿ 1,341 ಮಂದಿ ಭಾಗಿಯಾಗಿದ್ದರು.
ಖಡಕವಾಸ್ಲಾದಲ್ಲಿರುವ ಸೇನಾಪಡೆಗಳ ತರಬೇತಿ ಕೇಂದ್ರದ ಖೇತ್ರಪಾಲ್ ಪರೇಡ್ ಮೈದಾನದಲ್ಲಿ ಪಥಸಂಚಲನ ನಡೆಯಿತು. ಕೆಡೆಟ್ಗಳು ಅತ್ಯಂತ ಕರಾರುವಕ್ಕಾಗಿ ಮತ್ತು ಶಿಸ್ತಿನಿಂದ ಹೆಜ್ಜೆ ಹಾಕಿದರು.
ಅಕಾಡೆಮಿಯ ಕೆಡೆಟ್ ಕ್ಯಾಪ್ಟನ್ ಉದಯವೀರ್ ಸಿಂಗ್ ನೇಗಿ ಅವರು ಪರೇಡ್ ಮುನ್ನಡೆಸಿದರು. ಸೇನಾಪಡೆಯ ಮಾಜಿ ಮುಖ್ಯಸ್ಥ, ಮಿಜೋರಾಂ ರಾಜ್ಯಪಾಲ ಜನರಲ್ ವಿ.ಕೆ.ಸಿಂಗ್ ಅವರು ನಿರ್ಗಮನ ಪಥಸಂಚಲನದ ಪರಿಶೀಲನೆ ನಡೆಸಿದರು.
ಕಾರ್ಯಕ್ರಮದಲ್ಲಿ ಸಾಧಕರ ಪೋಷಕರು, ಗಣ್ಯರು, ಶಾಲಾ ಮಕ್ಕಳು, ನಾಗರಿಕರು, ಯೋಧರು ಮತ್ತು ನಿವೃತ್ತ ಯೋಧರು ಭಾಗಿಯಾಗಿದ್ದರು. ಸಂಪೂರ್ಣ ವಾತಾವರಣವು ಉತ್ಸಾಹಭರಿತವೂ, ವೈವಿಧ್ಯತೆಯಿಂದ ಕೂಡಿತ್ತು.
ವಿ.ಕೆ ಸಿಂಗ್ ಅವರು ಮೆರಿಟ್ ಆಧಾರದಲ್ಲಿ ಮೊದಲ ಮೂರು ಸ್ಥಾನ ಪಡೆದವರಿಗೆ ಚಿನ್ನ, ಬೆಳ್ಳಿ ಮತ್ತು ಕಂಚಿನ ರಾಷ್ಟ್ರಪತಿಗಳ ಪದಕವನ್ನು ಪ್ರದಾನ ಮಾಡಿದರು.
ಬಿಸಿಎ ಪ್ರಿನ್ಸ್ ರಾಜ್ ಅವರಿಗೆ ಚಿನ್ನದ ಪದಕ, ಎಸಿಸಿ ಉದಯ್ವೀರ ಸಿಂಗ್ ನೇಗಿ ಅವರಿಗೆ ಬೆಳ್ಳಿ ಪದಕ ಮತ್ತು ಬಿಸಿಸಿ ತೇಜಸ್ ಭಟ್ ಅವರಿಗೆ ಕಂಚಿನ ಪದಕವನ್ನು ನೀಡಲಾಯಿತು.
ಪುರುಷ ಮತ್ತು ಮಹಿಳಾ ಕೆಡೆಟ್ಗಳು ನಿರ್ಗಮನ ಪಥಸಂಚಲನದಲ್ಲಿ ಭಾಗಿಯಾಗಿದ್ದರುವಿ.ಕೆ.ಸಿಂಗ್ ಮಿಜೋರಾಂ ರಾಜ್ಯಪಾಲ ಈ ಮಹಿಳೆಯರು 'ನಾರಿಶಕ್ತಿ'ಯ ಸಂಕೇತ. ಮಹಿಳೆಯರ ಬೆಳವಣಿಗೆ ಮಾತ್ರವಲ್ಲದೆ; ಮಹಿಳಾ ನೇತೃತ್ವದ ಅಭಿವೃದ್ಧಿಗೆ ಇದು ಮುನ್ನುಡಿ
ಸುಪ್ರೀಂ ನಿರ್ದೇಶನದ ಬಳಿಕ ಅವಕಾಶ
ಸುಪ್ರೀಂ ಕೋರ್ಟ್ 2021ರಲ್ಲಿ ನಿರ್ದೇಶನ ನೀಡಿದ ನಂತರ ಕೇಂದ್ರ ಲೋಕಸೇವಾ ಆಯೋಗವು ಮಹಿಳೆಯರಿಗೆ ರಕ್ಷಣಾ ಅಕಾಡೆಮಿಗೆ ಸೇರ್ಪಡೆಯಾಗಲು ಅವಕಾಶ ನೀಡಿತ್ತು. ಹೀಗಾಗಿ ಮೊದಲ ಬ್ಯಾಚ್ನ ಮಹಿಳಾ ಕೆಡೆಟ್ಗಳು 2022ರಲ್ಲಿ 'ಎನ್ಡಿಎ' ಕೋರ್ಸ್ಗೆ ಸೇರ್ಪಡೆಯಾಗಿದ್ದರು.




