ಕಾಸರಗೋಡು: ರಂಗಚಿನ್ನಾರಿಯ 19ನೇ ವಾರ್ಷಿಕೋತ್ಸವ, ಪ್ರಶಸ್ತಿ ಪ್ರದಾನ ಸಮಾರಂಭ ಪದ್ಮಗಿರಿ ಕಲಾ ಕುಟೀರದಲ್ಲಿ ಕಾರ್ಯಕ್ರಮ ನಡೆಯಿತು.
ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಸ್ವಾಮೀಜಿ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿ, "ಎಲೆಮರೆಯಲ್ಲಿನ ಪ್ರತಿಭಾನ್ವಿತರನ್ನು ಹಾಗೂ ಹಿರಿಯ ಕಲಾವಿದರನು ಗುರುತಿಸಿ, ಅವರಿಗೆ ವೇದಿಕೆ ಕಲ್ಪಿಸುವುದರಿಂದ ಯುವ ಪ್ರತಿಭೆಗಳಿಗೆ ಕಲೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯಾಗುತ್ತದೆ. ಜತೆಗೆ ಅವರಲ್ಲಿನ ಸುಪ್ತ ಪ್ರತಿಭೆ ಅನಾವರಣಗೊಳ್ಳಲು ಕಾರಣವಾಗುತ್ತದೆ. ಕಲೆ, ಸಾಹಿತ್ಯ, ಸಂಸ್ಕøತಿಯ ಉಳಿವಿಗಾಗಿ ನಿರಂತರ ಕೈಂಕರ್ಯ ನಡೆಸುತ್ತಿರುವ ರಂಗಚಿನ್ನಾರಿ ಚಟುವಟಿಕೆ ಶ್ಲಾಘನೀಯ ಹಾಗೂ ಯುವ ಪ್ರತಿಭೆಗಳಿಗೆ ಆಶಾದಾಯಕವಾಗಿರುವುದಾಗಿ ತಿಳಿಸಿದರು.
ಖ್ಯಾತ ಪತ್ರಕರ್ತ ರವೀಂದ್ರ ಜೋಶಿ ಮಾತನಾಡಿ "ಎರಡು ದಶಕಗಳಿಂದ ನಿರಂತರವಾಗಿ ಕನ್ನಡ ನಾಡು, ನುಡಿ, ಸಂಸ್ಕøತಿಗಾಗಿ ದುಡಿಯುತ್ತಿರುವುದು ಕಷ್ಟದ ಕೆಲಸವಾದರೂ ಕನ್ನಡ ಭಾಷೆ ಮೇಲಿನ ಅಭಿಮಾನದಿಂದ ದುಡಿಯುತ್ತಿರುವ ರಂಗ ಚಿನ್ನಾರಿ ಸಾಧನೆ ಸಮಾಜಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.
ಖ್ಯಾತ ನೇತ್ರ ತಜ್ಞ ಹಾಗೂ ಧರ್ಮದರ್ಶಿ ಡಾ. ಅನಂತ ಕಾಮತ್ ಅದ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಯಕ್ಷಗಾನ ಕ್ಷೇತ್ರದ ಸಾಧನೆಗಾಗಿ ಮಾಧವ ಪಾಟಾಳಿ ಇವರಿಗೆ 'ಶ್ರೀ ಕೇಶವಾನಂದ ಭಾರತಿ ಪ್ರಶಸ್ತಿ', ನಾಟಕ ಮತ್ತು ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ರಾಂ ಎಲ್ಲಂಗಳ ಮತ್ತು ಸಂಗೀತ ಕ್ಷೇತ್ರದ ಸಾಧನೆಗಾಗಿ ಶಕುಂತಲಾ ಕೃಷ್ಣ ಭಟ್ ಇವರಿಗೆ 'ರಂಗಚಿನ್ನಾರಿ ಪ್ರಶಸ್ತಿ', ಸಿನೆಮಾ ಕ್ಷೇತ್ರದ ಸಾಧನೆಗಾಗಿ ಕಿರಣ್ ರಾಜ್, ಕ್ರೀಡಾ ಕ್ಷೇತ್ರದ ಸಾಧನೆಗಾಗಿ ದೀಕ್ಷಾ ಕೆ. ಇವರಿಗೆ 'ರಂಗಚಿನ್ನಾರಿ ಯುವ ಪ್ರಶಸ್ತಿ'ಯನ್ನು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ನೀಡಿ ಗೌರವಿಸಿದರು.
ರಾಷ್ಟ್ರಪ್ರಶಸ್ತಿ ವಿಜೇತ ಸುಬ್ರಹ್ಮಣ್ಯ ಬಾಡೂರು, ಸಾಹಿತಿ ಉಮೇಶ ಮೈಸೂರು, ಉದಯಕುಮಾರ್ ಮನ್ನಿಪ್ಪಾಡಿ, ಜನಾರ್ದನ ಅಣಂಗೂರು, ದಿವ್ಯಗಟ್ಟಿ, ಶರಣ್ಯ, ನಾರಿ ಚಿನಾರಿಯ ಅಧ್ಯಕ್ಷೆ ಸವಿತಾ ಟೀಚರ್, ಯಕ್ಷಗಾನ ಕಲಾವಿದ ಸುಧಾಕರ ಸಾಲ್ಯಾನ್, ರಂಗಚಿನ್ನಾರಿ ನಿರ್ದೇಶಕರಾದ ಕೋಳಾರು ಸತೀಶ್ಚಂದ್ರ ಭಂಡಾರಿ, ಸತ್ಯನಾರಾಯಣ ಉಪಸ್ಥಿತರಿದ್ದರು. ರಂಗಚಿನ್ನಾರಿ ನಿರ್ದೇಶಕ ಕಾಸರಗೋಡು ಚಿನ್ನಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಬಬಿತಾ ಆಚಾರ್ಯ ಬಾಡೂರು ಪ್ರಾರ್ಥಿಸಿದರು.



