ನವದೆಹಲಿ: ಅಕ್ಷಯ ತೃತೀಯದಂದು ದೇಶದ ರಾಜಧಾನಿ ದೆಹಲಿಯು 21 ಸಾವಿರ ಮದುವೆಗಳಿಗೆ ಸಾಕ್ಷಿಯಾಗಿದೆ.
ಹಿಂದೂ ಪಂಚಾಂಗದ ಪ್ರಕಾರ ಅಕ್ಷಯ ತೃತೀಯವು ಮಂಗಳಕರವಾಗಿದೆ. ಹಾಗಾಗಿ, ಈ ದಿನದಂದು ಹಿಂದೂ ಕುಟುಂಬಸ್ಥರು ವಧು-ವರರ ವಿವಾಹ ಮಾಡುವುದು ವಾಡಿಕೆ.
ಸಾವಿರಾರು ಸಂಖ್ಯೆಯಲ್ಲಿ ಮದುವೆ ಕಾರ್ಯಕ್ರಮ ಜರುಗುತ್ತಿವೆ.
ಇದರಿಂದ ಕಲ್ಯಾಣ ಮಂಟಪ, ಹೋಟೆಲ್, ಅಡುಗೆ, ಸಲೂನ್, ಅಲಂಕಾರ, ಆರ್ಕೆಸ್ಟ್ರಾಕ್ಕೆ ಬೇಡಿಕೆ ಹೆಚ್ಚಿದೆ. ಬುಧವಾರ ಒಂದೇ ದಿನ ₹1 ಸಾವಿರ ಕೋಟಿಗೂ ಹೆಚ್ಚು ವಹಿವಾಟು ನಡೆದಿದೆ ಎಂದು ದೆಹಲಿಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಅಂದಾಜಿಸಿದೆ.
ಔತಣಕೂಟದ ಸಭಾಂಗಣ ಮತ್ತು ಹೋಟೆಲ್ಗಳ ಬಾಡಿಗೆ ದರವು ಶೇ 10ರಿಂದ ಶೇ 15ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ.
'ದೆಹಲಿಯಲ್ಲಿ ಚಿನ್ನ ಮತ್ತು ಬೆಳ್ಳಿ ಖರೀದಿಯ ವಹಿವಾಟು ಒಂದೇ ದಿನ ₹200 ಕೋಟಿ ದಾಟಿದೆ. ಬೆಲೆ ಏರಿಕೆಯಿಂದಾಗಿ ಗ್ರಾಹಕರು ಹಗುರ ಆಭರಣಗಳ ಖರೀದಿಗೆ ಹೆಚ್ಚು ಆಸಕ್ತಿ ತೋರಿದ್ದಾರೆ' ಎಂದು ಮಹಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿನ್ನದ ವ್ಯಾಪಾರಿ ಗುರ್ಮೀತ್ ಅರೋರಾ ಹೇಳಿದ್ದಾರೆ.




