ಕಾಸರಗೋಡು : ವಿದ್ಯಾರ್ಥಿಗಳನ್ನು ಮತ್ತು ಯುವ ಪೀಳಿಗೆಯನ್ನು ಕೇಂದ್ರೀಕರಿಸಿ ನಡೆಸುವ ಯಾವುದೇ ಕಾರ್ಯಕ್ರಮವು ರಾಷ್ಟ್ರ ನಿರ್ಮಾಣದ ಹಂತಕ್ಕೆ ತಲುಪುವ ಕಾರ್ಯಕ್ರಮ. ವಿದ್ಯಾರ್ಥಿ ದೆಸೆಯಲ್ಲಿ ಸಿಗುವ ಎಲ್ಲ ಸಹಕಾರ ಸೌಲಭ್ಯಗಳು ವಿದ್ಯಾರ್ಥಿಗಳಿಗೆ ಹೊಸ ಹುರುಪು ತುಂಬುತ್ತದೆ. ಅದು ಅವರ ವಿದ್ಯಾಭ್ಯಾಸಕ್ಕೆ ಪೂರಕವಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಡಾ.ಮಂಜುಳಾ ಅನಿಲ್ ರಾವ್ ಹೇಳಿದರು.
ಅವರು ಕಾಸರಗೋಡು ನಾಗರಕಟ್ಟೆಯ ಶ್ರೀ ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿ ಜನ್ಮ ದಿನೋತ್ಸವ ಪ್ರಯುಕ್ತ ನಡೆದ ರಾಮಕ್ಷತ್ರಿಯ ಸಮಾಜದ ಜಿಲ್ಲಾ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ನೀಡುವ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಶ್ರೀ ಭಿಕ್ಷು ಸೇವಾ ಸಮಾಜದ ಅಧ್ಯಕ್ಷ ಲಕ್ಷ್ಮಣ ಬೀರಂತಬೈಲ್ ಅಧ್ಯಕ್ಷತೆ ವಹಿಸಿದ್ದರು. ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಂಸ್ಥೆಯ ಕಾರ್ಯ, ಕಾರ್ಯಕ್ರಮಗಳಿಗೆ ಸಮಾಜ ಒಂದಾಗಿ ಸಹಕರಿಸಬೇಕು ಎಂದು ವಿನಂತಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕನ್ನಡ ಭವನದ ಡಾ.ವಾಮನ್ ರಾವ್ ಬೇಕಲ್, ಮಂಗಳೂರಿನ ಓಜಸ್ ಎನ್.ಜಿ.ಒ.ಸಂಸ್ಥೆ ಸ್ಥಾಪಕ ಅಧ್ಯಕ್ಷೆ ಮಂಗಳ ಎನ್.ಕೆ, ಪೋಲೀಸ್ ಇಲಾಖೆಯಲ್ಲಿ ರಾಷ್ಟ್ರಪತಿ ಪ್ರಶಸ್ತಿ ವಿಜೇತ ಜಯಪ್ರಕಾಶ್ ಮಂಗಳೂರು, ಪಾಂಡುರಂಗ ಸಿರಿಬಾಗಿಲು, ರೋಹಿತಾಕ್ಷ ನಾಗರಕಟ್ಟೆ, ಪಾಂಡುರಂಗ ವಿದ್ಯಾನಗರ, ದಿನೇಶ್ ಚಂದ್ರಗಿರಿ ಶುಭ ಹಾರೈಸಿದರು. ದಿನೇಶ್ ನಾಗರಕಟ್ಟೆ ಸ್ವಾಗತಿಸಿ, ರಂಜಿತಾ ಮೋಹನ್ದಾಸ್ ವಂದಿಸಿದರು. ಅರುಣಾ ಟೀಚರ್ ಕಾರ್ಯಕ್ರಮ ನಿರ್ವಹಿಸಿದರು
ಎಲ್.ಕೆ.ಜಿ.ಯಿಂದ ಡಿಗ್ರಿ ತರಗತಿ ವರೆಗಿನ ಸುಮಾರು 650ಮಂದಿ ವಿದ್ಯಾರ್ಥಿಗಳು ಉಚಿತ ಪುಸ್ತಕ ವಿತರಣೆಯ ಪ್ರಯೋಜನ ಪಡೆದುಕೊಂಡರು. ಕಾರ್ಯಕ್ರಮದ ಪ್ರಯುಕ್ತ ಶ್ರೀ ಶಾರದಾ ಭಜನಾಶ್ರಮದಲ್ಲಿ ಗಣಪತಿ ಹೋಮ, ಸಾಮೂಹಿಕ ಸತ್ಯನಾರಾಯಣ ಪೂಜೆ, ಶ್ರೀ ಭಿಕ್ಷುಲಕ್ಷ್ಮಣಾನಂದ ಸ್ವಾಮೀಜಿ ಪ್ರತಿಮೆಗೆ ಪುಷ್ಪಾರ್ಚನೆ, ಪಾದಪೂಜೆ ನಡೆಯಿತು.




.jpg)
