ಕುಂಬಳೆ: ಅಂಗಡಿಮೊಗರು ಗ್ರಾಮದ ದೇಲಂಪಾಡಿ ಶ್ರೀಮಹಾಲಿಂಗೇಶ್ವರ ದೇವಾಲಯದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಮಂಗಳವಾರ ಆರಂಭಗೊಂಡಿದೆ. ಮೇ.12ರ ವರೆಗೆ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಕಾರ್ಯಕ್ರಮಗಳು ನಡೆಯಲಿದೆ.
ಮಂಗಳವಾರ ಬೆಳಿಗ್ಗೆ 8ಕ್ಕೆ ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇಗುಲದ ಆಡಳಿತ ಮೊಕ್ತೇಸರ ಸತ್ಯನಾರಾಯಣ ಭಟ್ ಆನೆಮಜಲು ಅವರು ದೀಪ ಬೆಳಗಿಸಿ ಉಗ್ರಾಣ ಮುಹೂರ್ತ ನೆರವೇರಿಸಿದರು. ಬಳಿಕ ನೂತನವಾಗಿ ನಿರ್ಮಿಸಿದ ಬಡಗು ಗೋಪುರವನ್ನು ಹಿರಿಯ ಉದ್ಯಮಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಲೋಕಾರ್ಪಣೆಗೊಳಿಸಿ ಶುಭಹಾರೈಸಿದರು. ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ಭೋಜನ ನಡೆಯಿತು. ಅಪರಾಹ್ನ 3 ರಿಂದ ಬಾಡೂರು ಶ್ರೀಕೃಷ್ಣ ಭಜನಾ ಮಂದಿರ ಪರಿಸರದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಹೊರಟು ಶ್ರೀಕ್ಷೇತ್ರಕ್ಕೆ ವೈಭಪೋಪೇತವಾಗಿ ಆಗಮಿಸಿತು. ಸಂಜೆ 5.30ಕ್ಕೆ ತಂತ್ರಿವರ್ಯರ ಆಗಮನ, ವೈದಿಕ ಕಾರ್ಯಕ್ರಮಗಳು ಆರಂಭಗೊಂಡು ಬ್ರಹ್ಮಕಲಶೋತ್ಸವ ವಿಧಿ ವಿಧಾನಗಳು ಆರಂಭಗೊಂಡಿತು.
ರಾತ್ರಿ 7ಕ್ಕೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಧಾರ್ಮಿಕ ಮುಂದಾಳು ಗೋಪಾಲಕೃಷ್ಣ ಪೈ ಬದಿಯಡ್ಕ ಉದ್ಘಾಟಿಸಿದರು. ಕಲಾರತ್ನ ಶಂ.ನಾ.ಅಡಿಗ ಕುಂಬಳೆ ಅಧ್ಯಕ್ಷತೆ ವಹಿಸಿದ್ದರು. ವಿವಿಧ ವಲಯದ ಗಣ್ಯರು ಉಪಸ್ಥಿತರಿದ್ದರು.
ಇಂದು(ಬುಧವಾರ) ಬೆಳಿಗ್ಗೆ ವಿವಿಧ ವೈದಿಕ ಕಾರ್ಯಕ್ರಮಗಳು, ಸಂಜೆ 4.30ಕ್ಕೆ ಎಡನೀರು ಶ್ರೀ ಸಚ್ಛಿದಾನಂದ ಭಾರತೀ ಶ್ರೀಪಾದಂಗಳವರ ಆಗಮನ, ಧಾರ್ಮಿಕ ಸಭೆ ನಡೆಯಲಿದೆ. ಪ್ರಮುಖ ಗಣ್ಯರು ಭಾಗವಹಿಸುವ ಸಭೆಯಲ್ಲಿ ವೇ.ಮೂ.ಹಿರಣ್ಯ ವೆಂಕಟೇಶ್ವರ ಭಟ್ ಧಾರ್ಮಿಕ ಭಾಷಣ ಮಾಡುವರು.




