ನವದೆಹಲಿ: ಹೆದ್ದಾರಿಗೆ ಸೇರಿದ ಜಾಗವು ಅನಧಿಕೃತವಾಗಿ ಒತ್ತುವರಿ ಆಗುವುದನ್ನು ತಡೆಯಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್ಎಚ್ಎಐ) ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಗಸ್ತು ಕೈಗೊಳ್ಳಲು ಪೊಲೀಸ್ ಅಧಿಕಾರಿಗಳ ತಂಡವನ್ನು ರಚಿಸಬೇಕು ಎಂದು ಕೂಡ ಕೋರ್ಟ್ ಹೇಳಿದೆ.
'ರಾಜಮಾರ್ಗ್ ಯಾತ್ರಾ' ಹೆಸರಿನ ಆಯಪ್ ಲಭ್ಯವಿರುವ ಬಗ್ಗೆ ಸಾರ್ವಜನಿಕರಿಗೆ ತಿಳಿಸಲು ಮಾಧ್ಯಮಗಳ ಮೂಲಕ ಜಾಹೀರಾತು ನೀಡಬೇಕು ಎಂದು ಕೇಂದ್ರಕ್ಕೆ ಸೂಚನೆ ನೀಡಿದೆ.
ರಾಷ್ಟ್ರೀಯ ಹೆದ್ದಾರಿ ಬಳಕೆ ಮಾಡುವವರಿಗೆ ಸಮಗ್ರ ಮಾಹಿತಿ ಒದಗಿಸಲು ಹಾಗೂ ಅವರ ದೂರುಗಳನ್ನು ಪರಿಹರಿಸಲು ಎನ್ಎಚ್ಎಐ ಈ ಆಯಪ್ ಅಭಿವೃದ್ಧಿಪಡಿಸಿದೆ.
ರಾಜ್ಯಗಳ ಪೊಲೀಸರು ಅಥವಾ ಇತರ ಸಿಬ್ಬಂದಿಯನ್ನು ಒಳಗೊಂಡ ವಿಚಕ್ಷಣಾ ತಂಡವನ್ನು ಎನ್ಎಚ್ಎಐ ರಚಿಸಬೇಕು. ಈ ತಂಡಗಳು ನಿಯಮಿತವಾಗಿ ಗಸ್ತು ತಿರುಗಬೇಕು ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕ ಮತ್ತು ಆಗಸ್ಟೀನ್ ಜಾರ್ಜ್ ಮಸೀಹ್ ಅವರು ಇರುವ ವಿಭಾಗೀಯ ಪೀಠವು ಹೇಳಿದೆ.

