HEALTH TIPS

ಅಂತರರಾಷ್ಟ್ರೀಯ ಗಡಿಯಲ್ಲಿ 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ಮುಂದುವರಿದಿದೆ: BSF

ಜಮ್ಮು: ನೆರೆಯ ಪಾಕಿಸ್ತಾನವನ್ನು ನಂಬಲು ಸಾಧ್ಯವಿಲ್ಲದ ಕಾರಣ ಅಂತರರಾಷ್ಟ್ರೀಯ ಗಡಿಯಲ್ಲಿ 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ. ಜತೆಗೆ, ಕಾವಲು ಪಡೆಗಳು ಹೆಚ್ಚಿನ ನಿಗಾವಹಿಸಿವೆ ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಮಹಾ ನಿರೀಕ್ಷಕ ಶಶಾಂಕ್ ಆನಂದ್ ತಿಳಿಸಿದ್ದಾರೆ.

‌‌ನಾವು (ಭದ್ರತಾ ಪಡೆಗಳು) ದೇಶದ ಪ್ರತಿ ಇಂಚು ಭೂಮಿಯ ಮೇಲೂ ನಿಕಟ ನಿಗಾ ಇಟ್ಟಿದ್ದೇವೆ. ಗಡಿಯಲ್ಲಿ ಒಳನುಸುಳುವಿಕೆ ಪ್ರಯತ್ನಗಳನ್ನು ವಿಫಲಗೊಳಿಸಲು ಕಟ್ಟೆಚ್ಚರ ವಹಿಸಿದ್ದೇವೆ ಎಂದು ಆನಂದ್ ಹೇಳಿದ್ದಾರೆ.

ಪಾಕಿಸ್ತಾನದ ಶೆಲ್ ದಾಳಿ ಮತ್ತು ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಳಿಕ ತೆಗೆದುಕೊಂಡ ಭದ್ರತಾ ಕ್ರಮಗಳ ಅಡಿಯಲ್ಲಿ ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಉಗ್ರರ ಒಳನುಸುಳುವಿಕೆಯ ಸಾಧ್ಯತೆಯ ಕುರಿತ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ.

'ನಾವು ಗಡಿಯುದ್ದಕ್ಕೂ ಸಾಧ್ಯವಾದಷ್ಟು ಹೆಚ್ಚಿನ ಜಾಗರೂಕತೆ ಕಾಯ್ದುಕೊಳ್ಳುತ್ತಿದ್ದೇವೆ. ಶತ್ರುಗಳು ದುಷ್ಕೃತ್ಯ, ಗಡಿಯಾಚೆಗಿನ ಗುಂಡಿನ ದಾಳಿ ಅಥವಾ ಒಳನುಸುಳುವಿಕೆಗೆ ಪ್ರಯತ್ನಿಸುವ ಬಗ್ಗೆ ನಿರಂತರವಾಗಿ ಮಾಹಿತಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಗಡಿಯಲ್ಲಿ ನಾವು ಹೆಚ್ಚು ನಿಗಾವಹಿಸಿದ್ದೇವೆ. ಜತೆಗೆ, ಬಲವಾದ ಕಣ್ಗಾವಲು ವ್ಯವಸ್ಥೆಗಳನ್ನು ನಿಯೋಜಿಸಿದ್ದೇವೆ' ಎಂದು ಅವರು ಹೇಳಿದ್ದಾರೆ.

ಸಹಾಯಕ ಕಮಾಂಡೆಂಟ್ ನೇಹಾ ಭಂಡಾರಿ ಸೇರಿದಂತೆ ಬಿಎಸ್‌ಎಫ್ ಮಹಿಳಾ ಸಿಬ್ಬಂದಿ ಮುಂಚೂಣಿ ಹುದ್ದೆಗಳನ್ನು ನಿರ್ವಹಿಸುವ ಮೂಲಕ ಅನುಕರಣೀಯ ಧೈರ್ಯವನ್ನು ಪ್ರದರ್ಶಿಸಿದ್ದಾರೆ ಎಂದು ಆನಂದ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಆಪರೇಷನ್ ಸಿಂಧೂರ ಕಾರ್ಯಾಚರಣೆಗೂ ಮುನ್ನ ಅಂತರರಾಷ್ಟ್ರೀಯ ಗಡಿಯುದ್ದಕ್ಕೂ 40ರಿಂದ 50 ಶಂಕಿತ ಭಯೋತ್ಪಾದಕರು ನಡೆಸಿದ ಒಳನುಸುಳುವಿಕೆ ಪ್ರಯತ್ನವನ್ನು ಬಿಎಸ್‌ಎಫ್ ಸಿಬ್ಬಂದಿ ವಿಫಲಗೊಳಿಸಿದ್ದರು. ಜತೆಗೆ, ಸಿಯಾಲ್‌ಕೋಟ್ ವಲಯದಲ್ಲಿ ಶಂಕಿತ ಭಯೋತ್ಪಾದಕರನ್ನು ಒಳಗೊಂಡ ಪ್ರಮುಖ ಒಳನುಸುಳುವಿಕೆ ಪ್ರಯತ್ನವನ್ನು ಬಿಎಸ್‌ಎಫ್ ಯಶಸ್ವಿಯಾಗಿ ವಿಫಲಗೊಳಿಸಿದೆ ಎಂದು ಆನಂದ್ ಹೇಳಿದ್ದಾರೆ.

ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಪಾಕ್‌ ವಿರುದ್ಧ ದಾಳಿಗಳನ್ನು ನಡೆಸುವ ಮೂಲಕ ಹೆಚ್ಚು ಹಾನಿಯನ್ನು ಉಂಟುಮಾಡಿದ್ದೇವೆ. ಜತೆಗೆ, ಪಾಕ್ ಸೇನಾ ಪಡೆಗಳನ್ನು, ರೇಂಜರ್‌ಗಳು ಮತ್ತು ಭಯೋತ್ಪಾದಕರು ಸಾವುನೋವುಗಳನ್ನು ಅನುಭವಿಸಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

ಸಾಂಬಾ ಸೆಕ್ಟರ್‌ನ ಒಂದು ಸೇನಾ ನೆಲೆಗೆ 'ಆಪರೇಷನ್ ಸಿಂಧೂರ' ಹೆಸರಿಡಲು ಮತ್ತು ಇತರ ಎರಡು ನೆಲೆಗಳಿಗೆ ಹುತಾತ್ಮ ಯೋಧರ ಹೆಸರಿಡಲು ನಾವು ಪ್ರಸ್ತಾಪಿಸುತ್ತಿದ್ದೇವೆ ಎಂದು ಅವರು ಉಲ್ಲೇಖಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries