ಬದಿಯಡ್ಕ: ಅಂತಾರಾಷ್ಟ್ರ ಮಾದಕದ್ರವ್ಯ ವಿರೋಧಿ ದಿನಾಚರಣೆಯಂದು ಗುರುವಾರ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಜಾಗೃತಿ ಕಾರ್ಯಕ್ರಮ ಜರಗಿತು. ಶಾಲಾ ಅಧ್ಯಾಪಕ ಗಣೇಶ್ ಅವರು ಮಾದಕ ದ್ರವ್ಯಗಳ ಬಳಕೆಯ ವಿರುದ್ಧ ಪ್ರತಿಜ್ಞೆಯನ್ನು ಬೋಧಿಸಿದರು.
ಯೋಗ ಶಿಕ್ಷಕ ವಿನಯಪಾಲ್ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಗೆಡವಲು ಅನೇಕರು ನಮ್ಮ ಜೊತೆಯಲ್ಲೇ ಇರುತ್ತಾರೆ. ಅವರ ದುರುದ್ದೇಶದ ನಡೆಯನ್ನು ಮೆಟ್ಟಿನಿಲ್ಲಬೇಕಾದ ಅನಿವಾರ್ಯತೆಯಲ್ಲಿ ನಾವಿದ್ದೇವೆ. ಅದರಲ್ಲಿ ಮಾದಕದ್ರವ್ಯಗಳ ಚಟವೂ ಒಂದಾಗಿದೆ. ಸರ್ಕಾರವೋ, ಸಂಬಂಧಪಟ್ಟ ಅಧಿಕಾರಿಗಳೋ ಮಾದಕ ದ್ರವ್ಯಗಳಿಂದುಟಾಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿಯನ್ನು ನೀಡಬಹುದಷ್ಟೇ ಹೊರತು ಅದನ್ನು ತಡೆಗಟ್ಟಲು ಕಷ್ಟಸಾಧ್ಯ. ಈ ನಿಟ್ಟಿನಲ್ಲಿ ನಾವು ಜಾಗೃತರಾಗಬೇಕು. ಅಂತಹ ದುಶ್ಚಟಗಳಿಗೆ ದಾಸನಾಗದೇ ಇದ್ದು, ಇತರರಿಗೂ ತಿಳುವಳಿಕೆಯನ್ನು ನೀಡಬೇಕು. ಇಲಾಖೆಯ ಅಧಿಕಾರಿಗಳು ಮಾದಕ ದ್ರವ್ಯಗಳ ಸಾಗಾಟಗಾರರನ್ನು ಮಟ್ಟಹಾಕಲು ಸಾರ್ವಜನಿಕರೂ ಅವರೊಂದಿಗೆ ಸಹಕರಿಸಬೇಕಾಗಿದೆ. ಮಾದಕವಸ್ತುಗಳು ಹಾನಿಕಾರಕವಾಗಿದ್ದು ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ. ಪ್ರತಿಯೊಬ್ಬರೂ ನಾನು ಮಾದಕದ್ರವ್ಯಗಳನ್ನು ಉಪಯೋಗಿಸುವುದಿಲ್ಲವೆಂಬ ಪ್ರತಿಜ್ಞೆಯನ್ನು ಕೈಗೊಂಡು ಅದನ್ನು ಅನುಷ್ಠಾನಗೊಳಿಸಿದರೆ ಸುಂದರ ಸ್ವಸ್ಥ ಆರೋಗ್ಯಭರಿತ ಸಮಾಜವನ್ನು ಕಾಣಲು ಸಾಧ್ಯ ಎಂದರು.
ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಮಾತನಾಡಿ ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ದುಷ್ಟ ಚಟಗಳು ಬೇಗನೆ ನಮ್ಮನ್ನು ಆವರಿಸಿಕೊಳ್ಳುತ್ತದೆ. ಮಾದಕ ದ್ರವ್ಯಗಳನ್ನು ಬಳಸುವುದು ಹಾಗೂ ಅದನ್ನು ವಿತರಿಸಿ ಇತರರ ಜೀವನವನ್ನೂ ಹಾಳುಗೆಡಹುವ ಕಾರ್ಯದ ವಿರುದ್ಧ ನಾವೆಲ್ಲ ಧ್ವನಿಯೆತ್ತಬೇಕಾಗಿದೆ. ಭಾರತದ ಸತ್ಪ್ರಜೆಯಾಗಿ ಬಾಳುವ ನಿರ್ಧಾರ ನಮ್ಮದಾಗಲಿ ಎಂದರು.
ಶಾಲಾ ಆವರಣದಲ್ಲಿ ಮಾದಕ ದ್ರವ್ಯಗಳ ವಿರೋಧಿ ದಿನಾಚರಣೆಯ ಪ್ರಯುಕ್ತ ರ್ಯಾಲಿಯನ್ನು ಹಮ್ಮಿಕೊಳ್ಳಲಾಯಿತು. ವಿವಿಧ ನಾಮಫಲಕಗಳೊಂದಿಗೆ ಘೋಷಣೆಯನ್ನು ಕೂಗುತ್ತಾ ವಿದ್ಯಾರ್ಥಿಗಳು, ಸ್ಕೌಟ್, ಅಧ್ಯಾಪಕರು ಮೆರವಣಿಗೆಯನ್ನು ನಡೆಸಿದರು.





