ಇಂಫಾಲ್: 'ರಾಷ್ಟ್ರಪತಿ ಆಳ್ವಿಕೆಯಿರುವ ಮಣಿಪುರದಲ್ಲಿ ಜನಪರ ಸರ್ಕಾರ ರಚನೆಯ ಯತ್ನ ನಡೆದಿದೆ' ಎಂದು ಮಾಜಿ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಶನಿವಾರ ಇಲ್ಲಿ ತಿಳಿಸಿದರು.
'ನಮ್ಮದು ರಾಷ್ಟ್ರೀಯ ಪಕ್ಷ. ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ, ಮಿತ್ರಪಕ್ಷಗಳೊಟ್ಟಿಗೆ ಸರ್ಕಾರವನ್ನು ಪುನರ್ ಸ್ಥಾಪಿಸುವ ಕಾರ್ಯ ನಡೆದಿದೆ.
ಶೀಘ್ರದಲ್ಲೇ ಸರ್ಕಾರ ರಚನೆಯಾಗಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.
'ಬಿಜೆಪಿಯು ಪ್ರಸಕ್ತ ಬಿಕ್ಕಟ್ಟಿನ ಬಗ್ಗೆ ಮಾತ್ರ ಗಮನ ಹರಿಸಲಿದೆ. ಯಾರನ್ನೂ ದೂಷಿಸಲ್ಲ. ರಾಜ್ಯದಲ್ಲಿ ಶಾಂತಿ ಸ್ಥಾಪನೆಗಾಗಿ ಕೇಂದ್ರ ಸರ್ಕಾರ ಹಾಗೂ ಸಂಬಂಧಪಟ್ಟವರನ್ನು ಸಂಪರ್ಕಿಸುತ್ತಿದ್ದೇವೆ. ಈ ನಡುವೆ ಶಾಸಕರು ಸಹ ಪದೇ ಪದೇ ಭೇಟಿಯಾಗುವ ಮೂಲಕ ಸರ್ಕಾರದ ಪುನರ್ ಸ್ಥಾಪನೆಗೆ ಒತ್ತಾಯಿಸುತ್ತಿದ್ದಾರೆ. ಎಲ್ಲರಿಗೂ ಸೌಹಾರ್ದ ವಾತಾವರಣ ಬೇಕಿದೆ. ಇದನ್ನು ಸಾಧಿಸುವ ನಿಟ್ಟಿನಲ್ಲಿ ನಮ್ಮ ಕೆಲಸ ನಡೆದಿದೆ. ಇತ್ತೀಚೆಗೆ ಸಮುದಾಯಗಳ ನಡುವಿನ ಸಂಘರ್ಷವೂ ಕಡಿಮೆಯಾಗಿದೆ' ಎಂದು ಅವರು ತಿಳಿಸಿದರು.
'ರಾಜ್ಯದಲ್ಲಿ ಶಾಂತಿ ಸ್ಥಾಪನೆಗಾಗಿ ಕೇಂದ್ರ ಸರ್ಕಾರವೂ ಯತ್ನಿಸುತ್ತಿದೆ. ಅಕ್ರಮ ವಲಸಿಗರು ಹಾಗೂ ಮಾದಕವಸ್ತು ಜಾಲವು ಈಶಾನ್ಯ ಭಾರತದ ಮೂಲಕ ಇಡೀ ದೇಶಕ್ಕೆ ಮಾರಕವಾಗಿ ಪರಿಣಮಿಸಲಿದೆ ಎಂದು ನಾನು ಈ ಹಿಂದೆಯೇ ಹೇಳಿದ್ದೆ. ಇದೀಗ ಎಲ್ಲರೂ ಈ ಸಮಸ್ಯೆಯನ್ನು ನಿಧಾನವಾಗಿ ಅರ್ಥೈಸಿಕೊಂಡಿದ್ದಾರೆ. ಈ ಬದಲಾವಣೆಯು ಸಕಾರಾತ್ಮಕ ಸಂಕೇತವಾಗಿದೆ. ನಾವು ಒಟ್ಟಾಗಿ ಇದರ ವಿರುದ್ಧ ಹೋರಾಟಕ್ಕೆ ಅಣಿಯಾಗಬೇಕು' ಎಂದು ಹೇಳಿದರು.
-ಶಾರದಾ ದೇವಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷೆಇದೀಗ ಚುನಾವಣೆಯ ಸಮಯವಲ್ಲ. ಶಾಂತಿ ಸ್ಥಾಪನೆಗೆ ಒತ್ತು ಕೊಡಬೇಕು. ಜನರು ಜನಪರ ಸರ್ಕಾರವನ್ನು ಬಯಸುತ್ತಿದ್ದಾರೆ.




