ಕುಂಬಳೆ: ಶಿಕ್ಷಣ, ಸಾಹಿತ್ಯ, ಕಲೆ, ಕೈಗಾರಿಕೆ, ಕೃಷಿ ಸಹಿತ ಸರ್ವ ವಿಭಾಗಗಳಲ್ಲೂ ಅಭಿವೃದ್ಧಿಯ ಹರಿಕಾರರಾಗಿ ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರು ಅಪಾರ ಕೊಡುಗೆ ನೀಡಿದವರು. ಅವರು ಕನ್ನಡಿಗರ ಒಗ್ಗೂಡುವಿಕೆಗಾಗಿ, ಸಾಹಿತ್ಯ ಸಂಸ್ಕøತಿಗಳ ಬೆಳವಣಿಗೆಗೆ ಕನ್ನಡ ಸಾಹಿತ್ಯ ಪರಿಷತ್ತನ್ನು ಹುಟ್ಟಿಹಾಕಿ ವಿಶಿಷ್ಟತೆ ಮೆರೆದವರು ಎಂದು ಹಿರಿಯ ವಕೀಲ, ಲೇಖಕ ಥೋಮಸ್ ಡಿ ಸೋಜ ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಬುಧವಾರ ಸಂಜೆ ಸೀತಾಂಗೋಳಿಯ ವಕೀಲರ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಕಸಾಪ ಸಂಸ್ಥಾಪಕ ನಾಲ್ವಡಿ ಕೃಷ್ಣರಾಜ ಒಡೆಯರ್ 141ನೇ ಸಂಸ್ಮರಣಾ ದಿನಾಚರಣೆಯಲ್ಲಿ ಅವರು ಸಂಸ್ಮರಣಾ ಭಾಷಣಗೈದು ಮಾತನಾಡಿದರು.
ಸ್ವಾತಂತ್ರ್ಯ ಪೂರ್ವ ಕಾಲದ ಭಾರತದ ಶ್ರೇಷ್ಠ ರಾಜರಲ್ಲಿ ಅವರು ಒಬ್ಬರಾಗಿ ಅಭಿವೃದ್ಧಿ-ದೂರದೃಷ್ಟಿಯ ಯೋಜನಾನುಷ್ಠಾನಗಳ ಮೂಲಕ ಗಮನ ಸೆಳೆದಿದ್ದರು. ಅವರು ತಮ್ಮ ಆಡಳಿತದಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸುವ ಮೂಲಕ ಮೇಲ್ಪಂಕ್ತಿಯನ್ನು ಹಾಕಿಕೊಟ್ಟವರು. ಅವರು ತತ್ವಜ್ಞಾನಿಯಾಗಿದ್ದರು. ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಿದ್ದ ಅವರು ಮೀಸಲಾತಿ ಜಾರಿಗಹೆ ತಂದು ಸಮಾನತೆಯನ್ನು ಸಾಧಿಸಿದರು. ಅವರ ಬದುಕು ಸಾಧನೆಗಳನ್ನು ಹೊಸ ತಲೆಮಾರಿಗೆ ನೈಜ ರೂಪದಿಂದ ತಲುಪಿಸುವ ಯತ್ನಗಳಾಗಬೇಕು ಎಂದವರು ತಿಳಿಸಿದರು.
ಕಸಾಪ ಕೇರಳ ಗಡಿನಾಡ ಘಟಕಾಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಭಾಷೆ, ಸಂಸ್ಕøತಿ ಸಂವರ್ಧನೆಗೆ ಯುವ ಸಮೂಹವನ್ನು ಸೆಳೆಯುವ ನಿಟ್ಟಿನಲ್ಲಿ ಕಸಾಪ ಶ್ರಮಿಸುತ್ತಿದೆ. ಸುಧೀರ್ಘ ಅವಧಿಯ ಬಳಿಕ ಈ ವರ್ಷ ಕಾಸರಗೋಡು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುವುದು ಎಂದು ತಿಳಿಸಿದರು.
ಕವಯಿತ್ರಿ ವಿದ್ಯಾವಾಣಿ ಮಠದಮೂಲೆ ಶುಭಾಶಂಸನೆಗೈದರು. ಕಸಾಪ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ, ರಾಮಚಂದ್ರ ಭಟ್ ಧರ್ಮತ್ತಡ್ಕ ಉಪಸ್ಥಿತರಿದ್ದರು. ಗೌರವ ಕಾರ್ಯದರ್ಶಿ ಶೇಖರ ಶೆಟ್ಟಿ ಬಾಯಾರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರದೀಪ್ ಕುಮಾರ್ ಶೆಟ್ಟಿ ಬೇಳ ವಂದಿಸಿದರು.




.jpg)
.jpg)

