ಕಾಸರಗೋಡು: ನಾಡೋಜ ಡಾ. ಕಯ್ಯಾರ ಕಿಞಣ್ಣ ರೈ ಸ್ಮಾರಕ ಕನ್ನಡ ಭವನಕ್ಕೆ ಮುಖ್ಯ ರಸ್ತೆಯಿಂದ ತೆರಳುವ ಸಂಪರ್ಕ ರಸ್ತೆಯನ್ನು ಅಭಿವೃದ್ದಿಪಡಿಸಲು ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಅವರಿಗೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಕಾಸರಗೋಡು ಜಿಲ್ಲಾಧಿಕಾರಿ ಚೇಂಬರ್ನಲ್ಲಿ ಮನವಿ ಸಲ್ಲಿಸಲಾಯಿತು.
ಕಾಸರಗೋಡು ಶಾಸಕ ಎನ್.ಎ ನೆಲ್ಲಿಕುನ್ನು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಯನ್ನು ಭೇಟಿಮಾಡಲಾಯಿತು.
ಈ ಸಂದರ್ಭ ಹೊಸದಾಗಿ ನಿರ್ಮಾಣವಾದ ತಲಪ್ಪಾಡಿ-ತಿರುವನಂತಪುರ ರಾಷ್ಟ್ರೀಯ ಹೆದ್ದಾರಿಯ ಕಾಸರಗೋಡು ಜಿಲ್ಲೆಯಲ್ಲಿನ ಕನ್ನಡ ಪ್ರದೇಶಗಳ ಸ್ಥಳ ನಾಮದ ನಾಮಫಲಕಗಳಲ್ಲಿ, ಇಂಗ್ಲೀಷ್, ಹಿಂದಿ, ಮಲಯಾಳ ಜತೆಗೆ ಕನ್ನಡವನ್ನೂ ಅಳವಡಿಸುವಂತೆ ಆಗ್ರಹಿಸಲಾಯಿತು. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಭಾರತ ಸರ್ಕಾರದ ಭಾಷಾ ಅಲ್ಪ ಸಂಖ್ಯಾತರ ಇಲಾಖೆಯವರು ಜೂ.13ರಂದು ಬರೆದ ಪತ್ರದ ಪ್ರತಿಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಯಿತು. ಕಾಸರಗೋಡು ಜಿಲ್ಲೆಯ ವಿವಿಧ ರೈಲ್ವೇ ನಿಲ್ದಾಣಗಳಲ್ಲಿ ಕೂಡ ಕಡ್ಡಾಯವಾಗಿ ಕನ್ನಡದ ನಾಮಫಲಕಗಳನ್ನು ಅಳವಡಿಸಲು ಕೋರಲಾಯಿತು.
ಇದಕ್ಕೆ ಜಿಲ್ಲಾಧಿಕಾರಿಗಳು ಸೂಕ್ತವಾಗಿ ಸ್ಪಂದಿಸಿ ತಕ್ಷಣ ಈ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು, ನಂತರ ಕಾಸರಗೋಡು ಬದಿಯಡ್ಕದಲ್ಲಿ ನಿರ್ಮಾಣವಾಗುತ್ತಿರುವ ಕನ್ನಡ ಭವನ ನಿರ್ಮಾಣದ ಅಂತಿಮ ಕಟ್ಟಡದ ಪ್ರಗತಿಪರಿಶೀಲನೆ ನಡೆಸಲಾಯಿತು. ಪ್ರಾಧಿಕಾರ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಬದಿಯಡ್ಕ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರಾದ ಮಾಹಿಲ್ ಕೆಲೋಟ್, ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭ ಎಣ್ಮಕಜೆ ಪಂಚಾಯತಿಯ ಶೇಣಿ ಶ್ರೀ ಶಾರದಾಂಬಾ ಕನ್ನಡ ಮಾಧ್ಯಮ ಶಾಲೆಗೆ ಭೇಟಿ ನೀಡಿ ಕಾಮಗಾರಿ ಅವಲೋಕನ ನಡೆಸಲಾಯಿತು.


