HEALTH TIPS

ಬೆದ್ರಂಪಳ್ಳದ ಕೆಂಪುಕಲ್ಲಿನ ಕ್ವಾರಿಯಿಂದ ಪ್ರಾಣಾಪಾಯದ ಜೊತೆಗೆ ಪರಿಸರ ಹಾನಿಯ ಭೀತಿ-ಎಚ್ಚೆತ್ತುಕೊಳ್ಳದ ಇಲಾಖೆಗಳು

ಪೆರ್ಲ: ಜಿಲ್ಲೆಯಲ್ಲಿ ಕೆಂಪುಕಲ್ಲಿನ ಕ್ವಾರೆಗಳು ಕಂದಮ್ಮಗಳ ಪಾಲಿಗೆ ಮರಣಗುಂಡಿಗಳಾಗುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದೆ.  ಭಾರೀ ಪ್ರಮಾಣದಲ್ಲಿ ಕೆಂಪುಕಲ್ಲು ಸಂಗ್ರಹಿಸಿ ಉಂಟಾಗುವ ಹೊಂಡಗಳನ್ನು ಮುಚ್ಚದೆ, ಇದರಲ್ಲಿ ಮಳೆನೀರು ಸಂಗ್ರಹವಾಗಿ  ಪ್ರಾಣಾಪಾಯಕ್ಕೆ ಕಾರಣವಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ ಕೆಂಪುಕಲ್ಲಿನ ಕ್ವಾರೆಯಲ್ಲಿ ತುಂಬಿPಕೊಂಡ ನೀರಿಗೆ ಬಿದ್ದು, ಹಲವು ಮಂದಿ ಮಕ್ಕಳು ಪ್ರಾಣಕಳೆದುಕೊಂಡಿದ್ದಾರೆ.

ಎಣ್ಮಕಜೆ ಪಂಚಾಯಿತಿಯ ಬೆದ್ರಂಪಳ್ಳದಲ್ಲಿ ಪ್ರಾಣಾಪಾಯದ ಜತೆಗೆ ಪರಿಸರಕ್ಕೆ ಭಾರೀ ಹಾನಿ ತಂದೊಡ್ಡುವ ಕೆಂಪುಕಲ್ಲಿನ ಕ್ವಾರೆಯೊಂದು ಕಾರ್ಯಾಚರಿಸುತ್ತಿದೆ. ಸ್ಥಳೀಯಾಡಳಿತ, ಭೂಗರ್ಭ ಇಲಾಖೆ, ವಿದ್ಯುತ್ ಇಲಾಖೆ, ಪರಿಸರ ಇಲಾಖೆಗಳ ಮೌನ ಸಮ್ಮತಿಯಿಂದ ಈ ಕ್ವಾರೆ ಕಾರ್ಯಾಚರಿಸುತ್ತಾ ಬಂದಿರುವುದಾಗಿ ಸ್ಥಳೀಯರು ಅಭಿಪ್ರಾಯಪಡುತ್ತಾರೆ.  ಪ್ರಸಕ್ತ ಭಾರೀ ಪ್ರಮಾಣದ ಕಲ್ಲು ತೆರವುಗೊಳಿಸಿದ ನಂತರ ಇದರಲ್ಲಿ ಉಂಟಾಗಿರುವ ಹೊಂಡ ಮುಚ್ಚದೆ, ಗುತ್ತಿಗೆದಾರರು ತಮ್ಮ ಪಾಡಿಗೆ ತೆರಳಿದ್ದಾರೆ. ಜಾಗ ನೀಡಿರುವ ಅಥವಾ ಜಾಗ ಗುತ್ತಿಗೆ ಪಡೆದು ಕಲ್ಲು ಸಂಗ್ರಹಿಸಿರುವ ಗುತ್ತಿಗೆದಾರನಿಗೆ ಇಲ್ಲಿ ಸರ್ಕಾರದ ಯಾವುದೇ ಕಾನೂನು ಅನ್ವಯವಾದಂತೆ ಕಂಡುಬರುತ್ತಿಲ್ಲ. ಆಸುಪಾಸಿನ ಹಲವಾರು ಕುಟುಂಬಗಳು ಭಯದ ವಾತಾವರಣದಲ್ಲಿ ಕಾಲ ಕಳೆಯುವಂತಾಗಿದೆ. 

ಸುಮಾರು ಎರಡು ಎಕರೆ ವಿಸ್ತೀರ್ಣದ ಜಾಗದಿಂದ ಭಾರಿ ಪ್ರಮಾಣದ ಕಲ್ಲು ತೆಗೆಯಲಾಗಿದ್ದು ಇದರಿಂದ ಭಾರೀ ಪ್ರಪಾತವೇ ನಿರ್ಮಾಣವಾಗಿದೆ. ವಿಪರ್ಯಾಸವೆಂದರೆ, ಕ್ವಾರೆ ಮಧ್ಯೆ ವಿದ್ಯುತ್ ಕಂಬವೊಂದಿದ್ದು, ಇದನ್ನು ಹಾಗೇ ಬಿಟ್ಟು ಸುತ್ತು ಕಲ್ಲು ಕಡಿಯಲಾಗಿದೆ. ಈ ವಿದ್ಯುತ್ ಕಂಬ ಯಾವುದೇ ಕ್ಷಣದಲ್ಲೂ ಕುಸಿದು ಬೀಳುವ ಸಾಧ್ಯತೆಯಿದೆ. ವಿದ್ಯುತ್ ಕಂಬ ಕುಸಿದುಬಿದ್ದಲ್ಲಿ ಆಸುಪಾಸಿನ ಐದಾರು ಕುಟುಂಬಗಳಿಗೆ ಅಪಾಯ ತಪ್ಪಿದ್ದಲ್ಲ. ಈ ಕುಟುಂಬದ ಎಳೆಯ ಮಕ್ಕಳು  ಇದೇ ಕ್ವಾರಿ ಸನಿಹದಿಂದ ಓಡಾಡುತ್ತಿದ್ದಾರೆ. ಒಂದೆಡೆ ನೀರು ತುಂಬಿಕೊಳ್ಳುವ ಕ್ವಾರಿ, ಇನ್ನೊಂದೆಡೆ ಅಪಾಯದ ಭೀತಿಯಲ್ಲಿರುವ ವಿದ್ಯುತ್ ಕಂಬದಿಂದ ಇಲ್ಲಿನ ಮನೆಯವರು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ಮಣ್ಣನ ದಿಣ್ಣೆಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ವಿದ್ಯುತ್ ಕಂಬವನ್ನು ಬೇರೆಡೆ ಅಳವಡಿಸಲು ವಿದ್ಯುತ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.

ಇನ್ನು ವ್ಯಾಪಕವಾಗಿ  ಕಾರ್ಯಾಚರಿಸುತ್ತಿರುವ ಕೆಂಪುಕಲ್ಲು ಕ್ವಾರಿಗಳ ಅಸಮರ್ಪಕ ನಿರ್ವಹಣೆ ಬಗ್ಗೆ ನಿಗಾ ಇಡಬೇಕಾದ ಅಧಿಕಾರಿಗಳು    


ಪರಿಸರಕ್ಕೂ ಹಾನಿ:

ಬೆದ್ರಂಪಳ್ಳದ ಎತ್ತರದ ಪ್ರದೇಶದಲ್ಲಿ ಕೆಂಪು ಕಲ್ಲಿನ ಕ್ವಾರಿ ಕಾರ್ಯಾಚರಿಸುತ್ತಿದ್ದು, ಇಲ್ಲಿಂದ ಮಳೆನೀರಿನೊಂದಿಗೆ ಕೊಚ್ಚಿಕೊಂಡು ಬರುವ ಮಣ್ಣು ಬೆದ್ರಂಪಳ್ಳದ ವಿಸ್ತಾರವಾದ ಮದಕಕ್ಕೆ ತುಂಬಿಕೊಳ್ಳುತ್ತಿದೆ. ಒಂದು ಕಾಲಘಟ್ಟದಲ್ಲಿ ಎಣ್ಮಕಜೆ, ನಡುಬೈಲು, ಬಜಕೂಡ್ಲು ವರೆಗಿರುವ ಕೃಷಿಕರ ಜೀವನಾಡಿಯಾಗಿದ್ದ ಬೆದ್ರಂಪಳ್ಳ ಮದಕ, ಇಂದು ಜಲಸಂರಕ್ಷಣೆಗಷ್ಟೆ ಸೀಮಿತವಾಗಿದೆ. ಇದೇ ಮದಕವನ್ನು ಆಶ್ರಯಿಸಿ ಹಲವಾರು ಕೃಷಿಕರು ಭತ್ತದ ಬೇಸಾಯ ನಡೆಸುತ್ತಿದ್ದರು. ಕ್ರಮೇಣ ಮದಕದಲ್ಲಿ ನೀರಿನ ದಾಸ್ತಾನು ಕುಸಿಯುತ್ತಾ ಬಂದಿತ್ತು. ಜತೆಗೆ ಕೃಷಿಕರು ಬೇಸಾಯದಿಂದಲೂ ವಿಮುಖರಾಗತೊಡಗಿದ್ದರು. ಪ್ರಸಕ್ತ ಬೆದ್ರಂಪಳ್ಳ ಮದಕ ನೀರಿಂಗಿಸುವ ಪ್ರಕ್ರಿಯೆಯಲ್ಲಿ ಮಹತ್ವದ ಪಾತ್ರವಹಸುತ್ತಿದ್ದು, ಸರ್ಕಾರ ಇದರ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ. ಮದಕವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಆಸುಪಾಸು ಕಲ್ಲಿನ ಕ್ವಾರೆಗಳಿಂದ ಮಣ್ಣುಕೊಚ್ಚಿಕೊಂಡು ಸಾಗದಂತೆ ಕ್ರಮ ಕೈಗೊಳ್ಳಬೇಕಾಗಿದೆ. ಜತೆಗೆ ಮದಕದಲ್ಲಿ ನೀರು ದಾಸ್ತಾನುಗೊಳ್ಳುವ ರೀತಿಯಲ್ಲಿ ಸೂಕ್ತ ತಡೆಗೋಡೆ ನಿರ್ಮಾಣಕ್ಕೂ ಸರ್ಕಾರ ಮುಂದಾಗಬೇಕಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries