ಕಾಸರಗೋಡು: ಪ್ರತಿಷ್ಠಿತ ಕನ್ನಡದ ಸಂಸ್ಥೆಯಾದ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಗ್ರಂಥಾಲಯ ಹಾಗೂ ಕೇರಳ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಇವುಗಳ ಸಂಯುಕ್ತ ಆಶಯದಲ್ಲಿ ಪ್ರತಿವರ್ಷ ಕೊಡ ಮಾಡುವ "ನಾಡೋಜ ಡಾ. ಕಯ್ಯಾರ ರಾಷ್ಟ್ರೀಯ ಪ್ರಶಸ್ತಿ"ಗೆ ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರು ಹಾಗೂ ಪ್ರಸ್ತುತ ಕಲಬುರಗಿ ದೂರದರ್ಶನ ಕೇಂದ್ರದ ವಿಶೇಷ ಕಾರ್ಯಕ್ರಮ ನಿರೂಪಕರಾದ ಸಾಹಿತಿ ಡಾ. ಸದಾನಂದ ಪೆರ್ಲ, ಡಾ. ರಮಾನಂದ ಬನಾರಿ, ಡಾ. ವಸಂತಕುಮಾರ್ ಪೆರ್ಲ ಹಾಗೂ ಡಾ. ಶಿವಾನಂದ ಬೇಕಲ್ ಅವರನ್ನು 2025 ಸಾಲಿನ "ನಾಡೋಜ ಡಾ ಕಯ್ಯಾರ ರಾಷ್ಟ್ರೀಯ ಪ್ರಶಸ್ತಿ"ಗೆ ಆಯ್ಕೆ ಮಾಡಲಾಗಿದೆ ಎಂದು ಕಾಸರಗೋಡಿನ ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಮತ್ತು ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ವಿರಾಜ್ ಅಡೂರು ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಡಾ. ಸದಾನಂದ ಪೆರ್ಲ ಅವರು ಕಾಸರಗೋಡಿನ ಪೆರ್ಲ ಸಮೀಪದ ಬಜಕೂಡ್ಲು ನಿವಾಸಿ. "ಕಯ್ಯಾರ ಕಿಞ್ಞಣ್ಣ ರೈ ಅವರ ಸಾಹಿತ್ಯ ಮತ್ತು ಕಾಸರಗೋಡಿನ ಕನ್ನಡ ಹೋರಾಟ" ಎಂಬ ವಿಷಯದ ಕುರಿತಾಗಿ ಮಹಾ ಪ್ರಬಂಧವನ್ನು ಮಂಡಿಸಿ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಖ್ಯಾತ ಬಂಡಾಯ ಸಾಹಿತಿ ದಿ. ಡಾ. ಚನ್ನಣ್ಣ ವಾಲೀಕಾರ್ ಅವರ ಮಾರ್ಗದರ್ಶನದಲ್ಲಿ ಈ ಮಹಾಪ್ರಬಂಧ ಸಿದ್ಧಪಡಿಸಿದ್ದರು. ಡಾ ಪೆರ್ಲ ಅವರು ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಸ್ನಾತಕೋತ್ತರ ಅಧ್ಯಯನ ನಡೆಸಿ ನಂತರ ಮೈಸೂರು ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಪದವಿಯನ್ನು ಪಡೆದು ಮಾಧ್ಯಮ ರಂಗವನ್ನು ಪ್ರವೇಶ ಮಾಡಿದರು. ಕಾಸರಗೋಡಿನ ಪ್ರತಿ ಸೂರ್ಯ ಹಾಗೂ ಬೆಂಗಳೂರಿನಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಉಪಸಂಪಾದಕ, ವರದಿಗಾರನಾಗಿ ಕಾರ್ಯನಿರ್ವಹಿಸಿದ್ದರು. 1994 ರಿಂದ 2023 ರವರೆಗೆ ಕೇಂದ್ರ ಸರ್ಕಾರದ ಆಕಾಶವಾಣಿ ಕೇಂದ್ರಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಕಲಬುರಗಿ ಆಕಾಶವಾಣಿ ಕೇಂದ್ರದಿಂದ ಕಾರ್ಯಕ್ರಮ ಮುಖ್ಯಸ್ಥರಾಗಿ ನಿವೃತ್ತಿ ಹೊಂದಿದರು. ಪ್ರಸಕ್ತ ಕಲಬುರಗಿ ದೂರದರ್ಶನ ಕೇಂದ್ರದಲ್ಲಿ ವಿಶೇಷ ಕಾರ್ಯಕ್ರಮ ಸಂಯೋಜಕ ಹಾಗೂ ನಿರೂಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಹತ್ತಕ್ಕೂ ಹೆಚ್ಚು ಸಾಹಿತ್ಯ ಕೃತಿಗಳನ್ನು ರಚಿಸಿದ ಇವರಿಗೆ 2013ನೇ ಸಾಲಿನಲ್ಲಿ ಕರ್ನಾಟಕ ಸರಕಾರದ ಮಾಧ್ಯಮ ಅಕಾಡೆಮಿಯು "ಅಭಿವೃದ್ಧಿ ಪತ್ರಿಕೋದ್ಯಮ" ಪ್ರಶಸ್ತಿ ನೀಡಿ ಗೌರವಿಸಿತ್ತು.






