ಮುಂಬೈ: ಅತಿಯಾದ ಸಾಲ, ಹೆಚ್ಚಿನ ಬಡ್ಡಿದರ ಮತ್ತು ಸಾಲ ವಸೂಲಿ ವೇಳೆ ಒರಟಾಗಿ ನಡೆದುಕೊಳ್ಳುವ ವಿಷವರ್ತುಲವು ಕಿರುಸಾಲ ವಲಯದಲ್ಲಿ ಈಗಲೂ ಮುಂದುವರಿದಿದೆ ಎಂದು ಆರ್ಬಿಐ ಡೆಪ್ಯುಟಿ ಗವರ್ನರ್ ಎಂ. ರಾಜೇಶ್ವರ ರಾವ್ ಕಳವಳ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕಿರುಸಾಲ ವಲಯದ ಕೆಲವು ಅಂಶಗಳ ಬಗ್ಗೆ ಗಮನ ಹರಿಸಬೇಕಿದೆ ಎಂದು ಹೇಳಿದ್ದಾರೆ.
'ಕಿರುಸಾಲದ ಮೇಲಿನ ಬಡ್ಡಿ ದರವು ಈಚಿನ ಕೆಲವು ತ್ರೈಮಾಸಿಕಗಳಲ್ಲಿ ಕಡಿಮೆ ಆಗಿರುವುದು ಕಂಡುಬಂದಿದೆಯಾದರೂ, ಹೆಚ್ಚಿನ ಬಡ್ಡಿ ದರ ವಿಧಿಸುತ್ತಿರುವುದು ಕೆಲವೆಡೆ ಮುಂದುವರಿದಿದೆ' ಎಂದು ಅವರು ಹೇಳಿದ್ದಾರೆ.
ಕಿರುಸಾಲ ವಲಯವು ತಾನು ದುರ್ಬಲ ವರ್ಗಗಳ ಸಬಲೀಕರಣದಲ್ಲಿ ವಹಿಸುವ ಪಾತ್ರವನ್ನು ಗುರುತಿಸಿ, ಸಹಾನುಭೂತಿಯ ಹಾಗೂ ಅಭಿವೃದ್ಧಿ ಪರವಾದ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಕರೆ ನೀಡಿದ್ದಾರೆ.
ಸಾಲ ಪಡೆಯುವ ವ್ಯಕ್ತಿಗಳು ಅತಿಯಾದ ಸಾಲದ ಸುಳಿಯಲ್ಲಿ ಸಿಲುಕದಂತೆ ನೋಡಿಕೊಳ್ಳಲು ಕಿರುಸಾಲ ಸಂಸ್ಥೆಗಳು ಸಾಲ ನೀಡುವಾಗ ಹೆಚ್ಚಿನ ಪರಿಶೀಲನೆ ನಡೆಸಬೇಕು ಎಂದು ಸಲಹೆ ನೀಡಿದ್ದಾರೆ.
ಇಂತಹ ಸಂಸ್ಥೆಗಳು ಸಾಲದ ವಸೂಲಿಗೆ ಅನೈತಿಕವಾದ ಹಾಗೂ ಹಿತಕರವಲ್ಲದ ಮಾರ್ಗವನ್ನು ಅನುಸರಿಸಬಾರದು. ಹಣಕಾಸು ಸೇವೆಗಳನ್ನು ಜವಾಬ್ದಾರಿಯುತವಾಗಿ ಹಾಗೂ ಸುಸ್ಥಿರವಾಗಿ ಒದಗಿಸಬೇಕು ಎಂದು ಹೇಳಿದ್ದಾರೆ.

