ಮಂಜೇಶ್ವರ: ಮಂಜೇಶ್ವರ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವಾರ್ಷಿಕ ಮಹಾಸಭೆ ಭಾನುವಾರ ಸಂಜೆ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ನ್ಯಾಯವಾದಿ ನವೀನ್ ರಾಜ್ ಕೆ.ಜೆ ವಹಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಸುರೇಶ್ ಗಾಣಿಂಜಾಲ್ ಸ್ವಾಗತಿಸಿ, ವಾರ್ಷಿಕ ವರದಿ ವಾಚಿಸಿ, ಲೆಕ್ಕಪತ್ರವನ್ನು ಮಂಡಿಸಿದರು. ಬಳಿಕ 45 ನೇ ವರ್ಷದ ಮಂಜೇಶ್ವರ ಶ್ರೀ ಗಣೇಶೋತ್ಸವದ ನೂತನ ಸಮಿತಿಯ ಪದಾಧಿಕಾರಿಗಳ ಪದಗ್ರಹಣ ನಡೆಯಿತು.
ಗೌರವಾಧ್ಯಕ್ಷರಾಗಿ ಹೈಮೇಶ್ ಬಿ.ಎಂ ಕಟ್ಟೆಬಜಾರ್, ಅಧ್ಯಕ್ಷರಾಗಿ ಪದ್ಮನಾಭ ಕಡಪ್ಪರ, ಪ್ರಧಾನ ಕಾರ್ಯದರ್ಶಿಯಾಗಿ ಅವಿನಾಶ್ ಹೆಗ್ಡೆ ಮಂಜೇಶ್ವರ, ಕೋಶಾಧಿಕಾರಿಯಾಗಿ ನವೀನ್ ಅಡಪ ಹೊಸಬೆಟ್ಟು, ಪ್ರಧಾನ ಸಂಚಾಲಕರಾಗಿ ನ್ಯಾಯವಾದಿ ನವೀನ್ ರಾಜ್ ಕೆ.ಜೆ, ಸಂಘಟನಾ ಕಾರ್ಯದರ್ಶಿಯಾಗಿ ಹರೀಶ್ ಶೆಟ್ಟಿ ಮಾಡ, ಲೆಕ್ಕ ಪರಿಶೋಧಕರು ಹಾಗೂ ನಿರ್ವಾಹಕರಾಗಿ ರಮೇಶ್ ಕಟ್ಟೆಬಜಾರ್ ಆಯ್ಕೆಯಾದರು. ಕಾರ್ಯಕ್ರಮದ ಯಶಸ್ವಿಗಾಗಿ ಇತರ ಸಮಿತಿಗಳನ್ನು ರಚಿಸಲಾಯಿತು.
ಸಭೆಯಲ್ಲಿ ಈ ಬಾರಿಯ 45 ನೇ ವರ್ಷದ ಸಾರ್ವಜನಿಕ ಮಂಜೇಶ್ವರ ಶ್ರೀ ಗಣೇಶೋತ್ಸವವು ಆಗಸ್ಟ್ ತಿಂಗಳ 27 ರಿಂದ 30 ರವರೆಗೆ ವಿವಿಧ, ವೈದಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಸಲು ತೀರ್ಮಾನಿಸಲಾಯಿತು. ಆಗಸ್ಟ್ 30 ರಂದು ನಡೆಯುವ ಮಹಾಗಣಪತಿಯ ವಿಸರ್ಜನಾ ಮೆರವಣಿಗೆಯು ಅಪರಾಹ್ನ 12ಕ್ಕೆ ಹೊರಟು ರಾತ್ರಿ 9.30ಕ್ಕೆ ಕಣ್ವತೀರ್ಥ ತಲುಪಿ ಮಹಾಗಣಪತಿ ವಿಗ್ರಹವನ್ನು ಜಲಸ್ತಂಭನಗೊಳಿಸಲು ಪ್ರಧಾನವಾಗಿ ಚರ್ಚಿಸಿ ತೀರ್ಮಾನಿಸಲಾಯಿತು. ಇದಕ್ಕನುಗುಣವಾಗಿ ಶೋಭಾಯಾತ್ರೆಯಲ್ಲಿ ಮೆರುಗು ನೀಡಲು ದೃಶ್ಯ ರೂಪಕವನ್ನು ಅಳವಡಿಸುವ ಸಂಘ ಸಂಸ್ಥೆಗಳಿಗೆ ಪ್ರತಿಯೊಂದು ಕಡೆಗಳಲ್ಲಿ ಪ್ರದರ್ಶನ ನೀಡಲು ಕೇವಲ 10 ನಿಮಿಷದ ಕಾಲವಕಾಶ ನೀಡಲಾಗಿದ್ದು, 10 ನಿಮಿಷದ ಅವಧಿಯ ಪುರಾಣ, ಚಾರಿತ್ರಿಕದ ಸಾರವನ್ನು ಹೊಂದಿರುವ ದೃಶ್ಯ ರೂಪಕಗಳನ್ನು ಮಾತ್ರವೇ ಶೋಭಾಯಾತ್ರೆಯಲ್ಲಿ ಪ್ರದರ್ಶಿಸಲು ಸಂಘ ಸಂಸ್ಥೆಗಳಿಗೆ ಸಮಿತಿ ಅನುಮತಿ ನೀಡುತ್ತಿದೆ. ಸಮಯದ ಅಭಾವವಿರುವ ಕಾರಣ ಶೋಭಾಯಾತ್ರೆಯಲ್ಲಿ ಕುಣಿತ ಭಜನಾ ತಂಡಗಳ ಕುಣಿತ ಭಜನೆ ಪ್ರದರ್ಶನ ರದ್ದುಗೊಳಿಸಲಾಗಿದ್ದು, ದಾರಿಯುದ್ದಕ್ಕೂ ಹಣ್ಣುಕಾಯಿ ಜೊತೆ ಕಾಯುವ ಭಕ್ತರ ಮನಸ್ಸಿಗೆ ನೋವಾಗದಂತೆ, ಪ್ರಮುಖ ಹಾದಿಗಳಲ್ಲಿ ಸಮಯಕ್ಕೆ ಸರಿಯಾಗಿ ಮೆರವಣಿಗೆ ಸಾಗಿ, ರಾತ್ರಿ 9.30 ಕ್ಕೆ ಕಣ್ವತೀರ್ಥ ತಲುಪಿ ವಿಗ್ರಹ ವಿಸರ್ಜನೆ ನಡೆಸಲು ಸಮಿತಿ ಸಭೆ ನಿರ್ಧರಿಸಿದೆ ಇದಕ್ಕಾಗಿ ಭಕ್ತರ ಹಾಗೂ ಸಂಘ ಸಂಸ್ಥೆಗಳ ಸಹಕಾರವನ್ನು ಸಮಿತಿ ಬಯಸಿದೆ. ಬಳಿಕ ನೂತನ ಸಮಿತಿಯ ಅಧಿಕಾರ ಹಸ್ತಾಂತರ ಕ್ಷೇತ್ರದ ಸನ್ನಿಧಿಯಲ್ಲಿ ನಡೆಯಿತು. ಸಂಘಟನಾ ಕಾರ್ಯದರ್ಶಿ ಹರೀಶ್ ಶೆಟ್ಟಿ ಮಾಡ ವಂದಿಸಿದರು.




.jpg)

