HEALTH TIPS

ಕೇರಳ: ಶುಭಾಂಶು ಜತೆ ವಿದ್ಯಾರ್ಥಿಗಳ ಸಂವಾದ

ತಿರುವನಂತಪುರಂ: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ (ಐಎಸ್‌ಎಸ್‌) ಭಾರತದ ಗಗನಯಾನಿ ಶುಭಾಂಶು ಶುಕ್ಲಾ ಅವರ ಜತೆಗೆ ಕೇರಳದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗುರುವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಂವಾದ ನಡೆಸಿದರು.

ಇಲ್ಲಿನ ವಿಕ್ರಮ್‌ ಸಾರಾಬಾಯಿ ಬಾಹ್ಯಾಕಾಶ ಕೇಂದ್ರದಲ್ಲಿ (ವಿಎಸ್‌ಎಸ್‌ಸಿ) ಸಂವಾದಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.

ಕೇರಳದ ವಿದ್ಯಾರ್ಥಿಗಳಿಗೆ ಸಂವಾದಕ್ಕಾಗಿ ಸುಮಾರು 10 ನಿಮಿಷಗಳವರೆಗೆ ಕಾಲಾವಕಾಶ ನೀಡಲಾಗಿತ್ತು. ಈ ಅವಧಿಯಲ್ಲಿ ವಿದ್ಯಾರ್ಥಿಗಳು ಶುಭಾಂಶು ಅವರಿಗೆ ಬಾಹ್ಯಾಕಾಶ ಪ್ರಯಾಣ, ಶೂನ್ಯ ಗುರುತ್ವ ಸೇರಿದಂತೆ ಹಲವು ಕುತೂಹಲಕಾರಿ ಪ್ರಶ್ನೆಗಳನ್ನು ಕೇಳಿದರು.

ಇದಕ್ಕೆ ಉತ್ತರಿಸಿದ ಶುಭಾಂಶು ಅವರು, ತಮ್ಮ ಪ್ರಯಾಣ, ಆಹಾರ, ಬಾಹ್ಯಾಕಾಶ ನಿಲ್ದಾಣದಲ್ಲಿ ಬಿಡುವಿನ ವೇಳೆಯನ್ನು ಹೇಗೆ ಕಳೆಯಲಾಗುತ್ತದೆ, ಅಲ್ಲಿ ನಡೆಸಲಾಗುವ ವೈಜ್ಞಾನಿಕ ಪ್ರಯೋಗಗಳ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ ಅವರು, ಐಎಸ್‌ಎಸ್‌ ಒಳಗೆ ಹೇಗೆ ತೇಲುತ್ತೇವೆ ಎಂಬುದನ್ನೂ ತೋರಿಸಿದರು. ಶೂನ್ಯ ಗುರುತ್ವಾಕರ್ಷಣೆಯಲ್ಲಿ ಚೆಂಡಿನೊಂದಿಗೆ ಹೇಗೆ ಆಟವಾಡಬಹುದು ಎಂಬುದನ್ನೂ ಪ್ರಸ್ತುತಪಡಿಸಿದರು. ಇದನ್ನು ಪರದೆ ಮೇಲೆ ವೀಕ್ಷಿಸಿದ ವಿದ್ಯಾರ್ಥಿಗಳು ರೋಮಾಂಚನಗೊಂಡರು.

ಶುಭಾಂಶು ಅವರ ತವರೂರಾದ ಲಖನೌದ ವಿದ್ಯಾರ್ಥಿಗಳ ಮತ್ತೊಂದು ಬ್ಯಾಚ್‌ ಸಹ ಅವರ ಜತೆ ಸಂವಹನ ನಡೆಸಿ, ಬಾಹ್ಯಾಕಾಶ ಪ್ರಯಾಣದ ಕುರಿತು ತಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆದರು.

'ಆಕ್ಸಿಯಂ-4' ಕಾರ್ಯಕ್ರಮದ ಭಾಗವಾಗಿ ಶುಕ್ಲಾ ಮತ್ತು ಇತರ ಮೂವರು ಗಗನಯಾನಿಗಳು ಜೂನ್‌ 26ರಂದು ಐಎಸ್‌ಎಸ್‌ ತಲುಪಿದ್ದಾರೆ. ಇವರು ಅಲ್ಲಿ 14 ದಿನಗಳವರೆಗೆ ವಾಸ್ತವ್ಯ ಇರಲಿದ್ದು, ಹಲವು ವೈಜ್ಞಾನಿಕ ಸಂಶೋಧನೆಗಳನ್ನು ಕೈಗೊಳ್ಳಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries