HEALTH TIPS

ಕುಳೂರು ಶಾಲೆಯಲ್ಲಿ ಪ್ರಜಾಪ್ರಭುತ್ವದ ಪರಿಚಯ ; ಪ್ರಜಾಪ್ರಭುತ್ವ ಮಾದರಿಯಲ್ಲಿ ಶಾಲಾ ಚುನಾವಣೆ

ಮಂಜೇಶ್ವರ : ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಶಾಲಾ ಮಕ್ಕಳಿಗೆ ಪರಿಚಯಿಸುವ ಸಲುವಾಗಿ ಕುಳೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಜಾಪ್ರಭುತ್ವ ಮಾದರಿಯ ಶಾಲಾ ಚುನಾವಣೆ ನಡೆಸಲಾಯಿತು.

ಆ ಪ್ರಯುಕ್ತ ಎರಡು ದಿನಗಳ  ಹಿಂದೆ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ ನಡೆಯಿತು. ಜೊತೆಗೆ ಮತಯಾಚನೆಯನ್ನೂ ಮಾಡಿದರು.


ಚುನಾವಣೆಯ ದಿನ  ಶಾಲಾ ಮಕ್ಕಳು ಸರದಿ ಸಾಲಿನಲ್ಲಿ ಬಂದು ಮತದಾನದ ಗುರುತನ್ನು ತಮ್ಮ ಕೈ ಬೆರಳುಗಳಿಗೆ ಹಾಕಿ ಗೌಪ್ಯ ಮತದಾನದ ಮೂಲಕ ತಮ್ಮ ನೆಚ್ಛಿನ ಅಭ್ಯರ್ಥಿಗಳಿಗೆ ಮತ ಚಲಾಯಿಸಿದರು. 

ಮತದಾನ ಪ್ರಕ್ರಿಯೆಯ ಎಲ್ಲಾ ಕಾರ್ಯಗಳನ್ನು ಮಕ್ಕಳೇ ನಿರ್ವಹಿಸಿದರು. ಮಕ್ಕಳಾದ ಮನ್ವಿತ್ ಕೆ, ಹನ್ವಿ, ಲಿಖಿತ್ ರಾಜ್, ಗಗನ್ ಹಾಗೂ ಲಿಖಿತ್ ಸಹಕರಿಸಿದರು. ಮತದಾನದ ಬಳಿಕ ಶಾಲಾ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಮುಖ್ಯ ಶಿಕ್ಷಕಿಯ ನೇತೃತ್ವದಲ್ಲಿ ಮತ ಎಣಿಕೆ ನಡೆಯಿತು. ಎಲ್ಲರ ಸಮ್ಮುಖದಲ್ಲಿ ಫಲಿತಾಂಶವನ್ನು ಘೋಷಿಸಿದರು.


ಶಾಲಾ ನಾಯಕನಾಗಿ ಉಲ್ಲಾಸ್ ಕೆ., ಉಪನಾಯಕಿಯಾಗಿ ಕುಮಾರಿ ವೀಕ್ಷಿತ ಆಯ್ಕೆಯಾದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ ವಿಜೇತ ಅಭ್ಯರ್ಥಿಗಳಿಗೆ ಹೂಗುಚ್ಚ ನೀಡಿ ಅಭಿನಂದಿಸಿದರು.

ಇದೇ ಸಂದರ್ಭದಲ್ಲಿ ಪ್ರಮಾಣ ವಚನ ಮತ್ತು ಮಂತ್ರಿ ಮಂಡಲವನ್ನೂ ರಚಿಸಲಾಯಿತು. ಸಾಂಸ್ಕøತಿಕ ಮಂತ್ರಿಯಾಗಿ ಕುಮಾರಿ ವೀಕ್ಷಿತ, ಕ್ರೀಡಾ ಮಂತ್ರಿಯಾಗಿ ಕುಮಾರಿ ತನ್ವಿ, ಆರೋಗ್ಯ ಮಂತ್ರಿಯಾಗಿ ಕುಮಾರಿ ಸಾತ್ವಿಕ ಪಿ. ಶೆಟ್ಟಿ ಆಯ್ಕೆಯಾದರು.ಬಳಿಕ ವಿಜೇತ ಅಭ್ಯರ್ಥಿಗಳ ವಿಜಯಯಾತ್ರೆ ಮೆರವಣಿಗೆ ನಡೆಯಿತು. ಶಾಲಾ ಶಿಕ್ಷಕಿಯರು ಉಪಸ್ಥಿತರಿದ್ದು, ಸಹಕರಿಸಿದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries