ಬದಿಯಡ್ಕ: ಗುರುಪೂರ್ಣಿಮೆಯ ಪುಣ್ಯದಿನದಂದು ಕಿಳಿಂಗಾರು ಸಾಯಿ ನಿಲಯದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಕೊಡುಗೈ ದಾನಿ ಕಿಳಿಂಗಾರು ಸಾಯಿರಾಂ ಕೃಷ್ಣ ಭಟ್ ಅವರು ಈ ಶುಭ ಸಂದರ್ಭದಲ್ಲಿ ಬಡಜನತೆಗೆ ವಿವಿಧ ರೂಪಗಳಲ್ಲಾಗಿ ನೆರವಾದರು. ಪುಷ್ಪಾವತಿ ನೀರ್ಚಾಲು ಎಂಬವರಿಗೆ ಚಿಕಿತ್ಸೆಗಾಗಿ ಇಪ್ಪತ್ತುಸಾವಿರ ರೂ, ಸುಬೈದಾ ಎಂಬವರ ಪುತ್ರಿಯ ಮದುವೆ ವೆಚ್ಚಕ್ಕಾಗಿ ಹತ್ತುಸಾವಿರ ರೂ, ಆಶಾಲತಾ ಬಂಡ್ರಡ್ಕ ಎಂಬವರ ಮಕ್ಕಳ ವಿದ್ಯಾಭ್ಯಾಸಕ್ಕೆ ಹತ್ತುಸಾವಿರ ರೂ, ಪದ್ಮಿನಿ ಬೇರಿಗೆ ಇವರ ಮಕ್ಕಳ ವಿದ್ಯಾಭ್ಯಾಸಕ್ಕೆ ಏಳು ಸಾವಿರ ರೂ, ಕುಕ್ಕ ಮುಂಡಕಾನ ಅವರಿಗೆ ಚಿಕಿತ್ಸೆಗೆ ಏಳುಸಾವಿರ ರೂ ಹಾಗೂ ರಾಮಚಂದ್ರ ಮಜಿರ್ಪಳ್ಳಕಟ್ಟೆ ಇವರಿಗೆ ಚಿಕಿತ್ಸೆಗೆ ಐದು ಸಾವಿರ ರೂಪಾಯಿಗಳ ನೆರವನ್ನು ನೀಡಿ ಮಾತನಾಡಿದರು. ಗುರುಪೂರ್ಣಿಮೆಯ ಈ ಸಂದರ್ಭದಲ್ಲಿ ಬಡಜನರ ಮುಖದಲ್ಲಿ ಮಂದಹಾಸವನ್ನು ಕಾಣುವುದೇ ನಮ್ಮ ಸೌಭಾಗ್ಯ. ತಂದೆಯವರ ಕಾಲದಲ್ಲಿಯೇ ಈ ಪುಣ್ಯದಿನವನ್ನು ಬಡಜನತೆ ನೆರವನ್ನು ನೀಡುವ ಮೂಲಕ ಅವರು ಸ್ಮರಣೀಯವನ್ನಾಗಿಸುತ್ತಿದ್ದರು. ಅವರು ನಮ್ಮ ಬಾಳಿಗೆ ದಾರಿದೀಪ ಎಂದರು.
ಈ ಸಂದರ್ಭದಲ್ಲಿ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಘುನಾಥ ಪೈ ಕುಂಬಳೆ, ಶಾರದಾ ಸಾಯಿರಾಂ ಭಟ್, ಶೀಲಾ ಕೆ.ಎನ್.ಭಟ್, ಜಯಪ್ರಕಾಶ್, ತಮಿಳು ಸೀರಿಯಲ್ ನಟಿ ಮಾಯಾ ವಿಶ್ವನಾಥ್, ಸಂಜೀವ ರೈ ಹಾಗೂ ಫಲಾನುಭವಿಗಳು ಪಾಲ್ಗೊಂಡಿದ್ದರು.





