ಕುಂಬಳೆ: ಮಲೆನಾಡು ಹೆದ್ದಾರಿಯ ಭಾಗವಾದ ಪೆರ್ಮುದೆಯಲ್ಲಿ ಬಸ್ಸು ತಂಗುದಾಣ ಇಲ್ಲದಿರುವುದು ಸಾರ್ವಜನಿಕರಿಗೆ ಬಹುದೊಡ್ಡ ಸಮಸ್ಯೆಯಾಗುತ್ತಿದೆ. ಪ್ರತಿದಿನ ನೂರಾರು ಪ್ರಯಾಣಿಕರು ಬಂದು ಹೋಗುವ ಇಲ್ಲಿ ಬಸ್ಸು ತಂಗುದಾಣ ಇಲ್ಲದಿರುವುದು ಪ್ರದೇಶವು ಮೂಲಸೌಕರ್ಯದಿಂದ ವಂಚಿತವಾದಂತಾಗಿದೆ. ಮಲೆನಾಡು ಹೆದ್ದಾರಿ ನಿರ್ಮಾಣದ ಅಂಗವಾಗಿ ಇಲ್ಲಿದ್ದ ಬಸ್ಸು ತಂಗುದಾಣವನ್ನು ತೆರವುಗೊಳಿಸಿ ಎರಡೂವರೆ ವರ್ಷಗಳಾಗಿವೆ. ನೂತನ ಬಸ್ಸು ತಂಗುದಾಣ ನಿರ್ಮಿಸುವುದಾಗಿ ನೀಡಿದ ಭರವಸೆಗಳು ಸುಳ್ಳಾಗಿವೆ.
ಧರ್ಮತ್ತಡ್ಕ, ಸೀತಾಂಗೋಳಿ, ಬಂದ್ಯೋಡು ಹೀಗೆ ಮೂರು ಭಾಗಗಳಿಗೆ ತೆರಳುವ ರಸ್ತೆಗಳು ಸಂಗಮಿಸುವ ಪೇಟೆಯಾದ ಪೆರ್ಮುದೆಯಲ್ಲಿ ಪ್ರಯಾಣಿಕರ ಸೌಕರ್ಯಾರ್ಥ ಬಸ್ಸು ತಂಗುದಾಣ ಇಲ್ಲದಿರುವುದು ಅಭಿವೃದ್ಧಿಯನ್ನು ಬೆರಳು ಮಾಡಿ ತೋರಿಸುವಂತಿದೆ. ಬಸ್ಸು ತಂಗುದಾಣ ಇಲ್ಲದಿರುವುದರಿಂದ ವಿದ್ಯಾರ್ಥಿಗಳು, ವೃದ್ಧರು, ಹಸುಗೂಸುಗಳೊಂದಿಗೆ ಬರುವ ಮಹಿಳೆಯರು ಪಡುವ ಪಾಡು ಹೇಳತೀರದು. ಮಳೆಗಾಲದಲ್ಲಿ ಸಮಸ್ಯೆ ಇನ್ನಷ್ಟು ಜಟಿಲವಾಗುತ್ತದೆ. ಆದುದರಿಂದ ಪೆರ್ಮುದೆಯಲ್ಲಿ ಶೀಘ್ರದಲ್ಲೇ ಬಸ್ಸು ತಂಗುದಾಣ ನಿರ್ಮಿಸಬೇಕು ಎಂದು ಪುತ್ತಿಗೆ ಪಂಚಾಯತಿ ಸದಸ್ಯ ಗಂಗಾಧರ ಅವರು ಮುಖ್ಯಮಂತ್ರಿಯವರಿಗೆ ಆನ್ಲೈನ್ ಮೂಲಕ ಮನವಿ ಸಲ್ಲಿಸಿದ್ದಾರೆ.

.jpg)
