ಮಂಜೇಶ್ವರ: ಮಂಜೇಶ್ವರದ ಆದರ್ಶ ನಿಲ್ದಾಣವಾಗಿರುವ ಮಂಜೇಶ್ವರ ರೈಲ್ವೇ ನಿಲ್ದಾಣದ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಅಂತಿಮ ಹಂತಕ್ಕೆ ತಲುಪಿದ್ದರೂ ಪ್ರಧಾನ ಕಟ್ಟಡದ ಅವಸ್ಥೆ ಶೋಚನೀಯಾವಸ್ಥೆಯಲ್ಲಿ ಮುಂದುವರಿಯುತ್ತಿದೆ. ನಿಲ್ದಾಣದ ಕಚೇರಿ ಕಾರ್ಯಾಚರಿಸುತ್ತಿರುವ ಕಟ್ಟಡ ದುರಸ್ಥಿ ಆರಂಭಗೊಳ್ಳಲು ಮೇಲಾಧಿಕಾರಿಗಳ ಹಸಿರು ನಿಶಾನೆಗಾಗಿ ಕಾಯುತ್ತಿದೆ.
ಓಬಿರಾಯನ ಕಾಲದಷ್ಟು ಹಳೆಯದಾಗಿರುವ ಕಟ್ಟಡವೊಂದರಲ್ಲಿ ನಿಲ್ದಾಣದ ಕಚೇರಿ ಇದೀಗ ಕಾರ್ಯಾಚರಿಸುತ್ತಿದೆ. ಮಳೆ ಬಿರುಸುಗೊಳ್ಳುತಿದ್ದಂತೆ ಸೋರುವಿಕೆಯೂ ಶುರುವಾಗಿದೆ. ನೀರಿನ ಸೋರಿಕೆಯನ್ನು ತಡೆಯಲು ಮೇಲ್ಭಾಗಕ್ಕೆ ಪ್ಲಾಸ್ಟಿಕ್ ಹೊದಿಕೆಯ ಜೊತೆಗೆ ಶೀಟನ್ನು ಅಳವಡಿಸಲಾಗಿದೆ. ಟಿಕೆಟ್ ಕೌಂಟರ್ ಹಾಗೂ ಸ್ಟೇಶನ್ ಮಾಸ್ಟರ್ ಕಚೇರಿಯಲ್ಲಿ ಈ ದುರವಸ್ಥೆ ಕಳವಳ ಮೂಡಿಸಿದೆ.
ನಿರ್ಮಾಣ ಪೂರ್ಣಗೊಂಡು ತಿಂಗಳುಗಳೇ ಕಳೆದರೂ ರೈಲ್ವೇ ನಿಲ್ದಾಣ ಅಭಿವೃದ್ಧಿಯ ಭಾಗವಾಗಿ ಟಿಕೆಟ್ ಕೌಂಟರ್ ಹಾಗೂ ಇತರ ಕಚೇರಿಗಳಿಗಾಗಿ ನಿರ್ಮಿಸಲಾದ ಕಟ್ಟಡವನ್ನು ಇಷ್ಟರ ತನಕ ತೆರೆದು ಕೊಟ್ಟಿಲ್ಲ. ನವೀಕರಣದ ಭಾಗವಾಗಿ ಟಿಕೆಟ್ ಕೌಂಟರನ್ನು ಪ್ರಸ್ತುತ ಕಟ್ಟಡದ ಹಿಂಬಾಗಕ್ಕೆ ಬದಲಿಸಿ ಬಹಳ ಸಮಯಗಳೇ ಕಳೆದಿದೆ. ಇದು ಕೂಡಾ ಪ್ರಯಾಣಿಕರಿಗೆ ಭಾರೀ ಸಮಸ್ಯೆಯನ್ನು ಸೃಷ್ಟಿಸಿದೆ. ಸ್ಪೇಶನ್ ನಲ್ಲಿ ಹೊಸ ಸಿಗ್ನಲ್ ಕಟ್ಟಡವನ್ನು ನಿರ್ಮಿಸಿದರೆ ಮಾತ್ರ ಹಳೆಯ ಕಟ್ಟಡವನ್ನು ತಪ್ಪಿಸಬಹುದಾಗಿದೆ. ಮತ್ತೊಂದೆಡೆ ಇಂಟರ್ ಲಾಕ್ ಹಾಗೂ ವಿದ್ಯುತ್ತೀಕರಣದ ಕೆಲಸ ನಡೆಯುತ್ತಿದೆ. ಇದೆಲ್ಲಾ ಪೂರ್ಣಗೊಂಡ ಬಳಿಕವಷ್ಟೇ ನಿಲ್ದಾಣದ ಸಮಸ್ಯೆಗೊಂದು ಅಂತ್ಯ ಕಾಣಬಹುದು. ಈ ಸೋರುತ್ತಿರುವ ಕಟ್ಟದಲ್ಲಿ ಇನ್ನೆಷ್ಟು ಕಾಲ ಮುಂದುವರಿಯುಬೇಕೆಂಬುದು ಊರವರ ಹಾಗೂ ಪ್ರಯಾಣಿಕರ ಪ್ರಶ್ನೆ.
ಸಂಬಂಧಪಟ್ಟವರು ಕೂಡಲೇ ಇತ್ತ ಗಮನ ಹರಿಸುವಂತೆ ಸ್ಥಳೀಯರು ಹಾಗೂ ಪ್ರಯಾಣಿಕರು ಆಗ್ರಹಿಸಿದ್ದಾರೆ.
ಅಭಿಮತ:
ದುರವಸ್ಥೆಯಲ್ಲಿ ಮಂಜೇಶ್ವರ ರೈಲ್ವೆ ನಿಲ್ದಾಣ ಕಟ್ಟಡ ಪ್ರಯಾಣಿಕರಿಗೆ ಸಮಸ್ಯೆ ಉಂಟುಮಾಡುತ್ತಿದೆ. ತೀವ್ರ ಮಳೆಯ ಕಾರಣ ನಿತ್ಯ ಪ್ರಯಾಣಿಕರಿಗೆ ಟಿಕೆಟ್ ಕೊಳ್ಳಲು ಹಾಗೂ ಇತರ ಅಗತ್ಯಗಳಿಗೆ ಸ್ಟೇಶನ್ ಕಾರ್ಯಾಲಯದೊಳಗೆ ನಿಲ್ಲಲೂ ಭಯವಾಗುತ್ತಿದೆ. ನಿಲ್ದಾಣದ ಹಿಂಭಾಗಕ್ಕೆ ಟಿಕೆಟ್ ಕೌಂಟರ್, ಕಾರ್ಯಾಲಯ ಸ್ಥಳಾಂತರಿಸಿದ್ದು ಮೂಲ ಸಮಸ್ಯೆಗೆ ಕಾರಣವಾಗಿದೆ. ನಿತ್ಯ ನೂರಾರು ವಿದ್ಯಾರ್ಥಿಗಳು, ಮಹಿಳೆಯರು ಆಶ್ರಯಿಸಿರುವ ಈ ನಿಲ್ದಾಣಕ್ಕೆ ಸೂಕ್ತ ಸುರಕ್ಷಿತ ವ್ಯವಸ್ಥೆ ಕಲ್ಪಿಸಬೇಕಿದೆ.
-ರಹ್ಮಾನ್ ಉದ್ಯಾವರ
ಕಾರ್ಯದರ್ಶಿ.ಮಂಜೇಶ್ವರ ಗ್ರಾಹಕರ ವೇದಿಕೆ

.jpg)
.jpg)
