ತಿರುವನಂತಪುರಂ: ಕೇರಳದ ಕೊಟ್ಟಾಯಂನ ಸರ್ಕಾರಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಕಟ್ಟಡವೊಂದು ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದ ಕುಟುಂಬಸ್ಥರನ್ನು ಆರೋಗ್ಯ ಸಚಿವೆ ವೀಣಾ ಜಾರ್ಜ್ ಭಾನುವಾರ ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.
ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಂದು ಅವರ ದುರಂತ ಸಾವು ಹೃದಯವಿದ್ರಾವಕ ಮತ್ತು ಅತ್ಯಂತ ನೋವಿನಿಂದ ಕೂಡಿದೆ. ಸರ್ಕಾರವು ಅವರೊಂದಿಗೆ ನಿಲ್ಲುತ್ತದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈಗಾಗಲೇ ಈ ಬಗ್ಗೆ ಮಾತನಾಡಿದ್ದಾರೆ. ಸಚಿವ ಸಂಪುಟದ ನಿರ್ಧಾರಗಳ ಆಧಾರದ ಮೇಲೆ ಕುಟುಂಬಕ್ಕೆ ಪರಿಹಾರ ಕ್ರಮಗಳನ್ನು ಘೋಷಿಸಲಾಗುವುದು ಎಂದು ಜಾರ್ಜ್ ತಿಳಿಸಿದ್ದಾರೆ.
ಕೊಟ್ಟಾಯಂನ ಸರ್ಕಾರಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಕಟ್ಟಡವೊಂದು ಕುಸಿದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಗುರುವಾರ ಸಂಜೆ ನಡೆದಿತ್ತು. ಘಟನೆಯಲ್ಲಿ ಬಾಲಕಿ ಸೇರಿ ಮೂವರು ಗಂಭೀರವಾಗಿ ಗಾಯಗೊಂಡಿದ್ದರು.
ಮೃತ ಮಹಿಳೆಯನ್ನು ತಳಯೋಲಾಪರಂಬುವಿನ ಬಿಂದು (52) ಎಂದು ಗುರುತಿಸಲಾಗಿತ್ತು. ಅಲೀನಾ (11), ಅಮಲ್ ಪ್ರದೀಪ್ (20) ಜಿನು ಸಾಜಿ (38) ಗಾಯಾಳುಗಳು. ಸದ್ಯ ಗಾಯಾಳುಗಳು ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಟ್ಟಡ (ವಾರ್ಡುಗಳಿಗೆ ಹೊಂದಿಕೊಂಡಿದ್ದ ಟಾಯ್ಲೆಟ್ ಕಾಂಪ್ಲೆಕ್ಸ್) ಕುಸಿತಕ್ಕೆ ಕಾರಣ ತಿಳಿದು ಬಂದಿಲ್ಲ. ಆದರೆ, ಕುಸಿದ ಕಟ್ಟಡ ಹಲವು ದಶಕಗಳಷ್ಟು ಹಳೆಯದ್ದು ಎಂದು ಪೊಲೀಸರು ತಿಳಿಸಿದ್ದಾರೆ.





