ಕಾಸರಗೋಡು: ಹೂವಿನ ವ್ಯಾಪಾರಿ ಕುಟುಂಬದ ಹತ್ತರ ಹರೆಯದ ಬಾಲಕನನ್ನು ಕೊಲೆಗೈದು, ಬಂಧಿತನಾಗಿ, ನ್ಯಾಯಾಲಯದಿಂದ ಜಾಮೀನಿನಲ್ಲಿ ಬಿಡುಗಡೆಗೊಂಡ ನಂತರ ತಲೆಮರೆಸಿಕೊಂಡ ಆರೋಪಿಯೊಬ್ಬನನ್ನು ಹದಿಮೂರು ವರ್ಷಗಳ ನಂತರ ಬಂಧಿಸಲಾಗಿದೆ. ಕರ್ನಾಟಕ ನಿವಾಸಿ ಸಮೀರ್ ಅಹಮ್ಮದ್(48)ಬಂಧಿತ. ಕರ್ನಾಟಕದಿಂದ ಹೂವು ತಂದು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಕುಟುಂಬದ ಹತ್ತರ ಹರೆಯದ ಬಾಲಕ ಸುನಿಲ್ ಎಂಬಾತನನ್ನು 2008ರ ಏ. 17ರಂದು ಕತ್ತು ಹಿಸುಕಿ ಕೊಲೆಗೈದು ಬಾಲಕನ ವಶದಲ್ಲಿದ್ದ 8500ರೂ. ನಗದು ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಹೊಸದುರ್ಗ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದು, ನಂತರ ಆರೋಪಿಯನ್ನು ಬಂಧಿಸಿದ್ದರು. ಬಾಲಕನ ಕುಟುಂಬ ಹೊಸದುರ್ಗದ ವಸತಿಗೃಹವೊಂದರಲ್ಲಿ ವಾಸಿಸುತ್ತಿದ್ದರು. ಹೆತ್ತವರು ಹೂವಿನ ವ್ಯಾಪಾರಕ್ಕಾಗಿ ಹೊರಗೆ ತೆರಳಿದ್ದು, ಬಾಲಕ ಮಾತ್ರ ಕೊಠಡಿಯಲ್ಲಿರುವುದನ್ನು ಮನಗಂಡು ಆರೋಪಿ ಕೊಠಡಿಗೆ ಹಾಡಹಗಲು ನುಗ್ಗಿ ಕೃತ್ಯವೆಸಗಿದ್ದನು.
ನ್ಯಾಯಾಂಗ ಬಂಧನದಲ್ಲಿದ್ದ ಸಮೀರ್ ಅಹಮ್ಮದ್ 2012ರಲ್ಲಿ ಜಾಮೀನಿನಲ್ಲಿ ಹೊರಬಂದ ನಂತರ ತಲೆಮರೆಸಿಕೊಂಡಿದ್ದನು. ಈತನಿಗಾಗಿ ಪೊಲೀಸರು ವಿವಿಧೆಡೆ ಹುಡುಕಾಟ ನಡೆಸಿದರೂ. ಪತ್ತೆಯಾಗದ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡ ಆರೋಪಿಯಾಗಿ ನ್ಯಾಯಾಲಯ ಘೋಷಿಸಿತ್ತು. ನಂತರ ಆರೋಪಿ ತಿರುಪತಿಯ ವೈಎಸ್ಸಾರ್ ಕಾಲನಿಯಲ್ಲಿರುವ ಬಗ್ಗೆ ಲಭಿಸಿದ ಮಾಹಿತಿಯನ್ವಯ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿ ಕರೆತಂದಿದ್ದರು.

