ಬದಿಯಡ್ಕ: ಸಮಾಜದ ಹೊಸ ಸುಶಿಕ್ಷಿತ ತಲೆಮಾರನ್ನು ಸೃಷ್ಟಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದುದು. ಕಾಸರಗೋಡಿನ ಕನ್ನಡ ಭಾಷೆ, ಶೈಕ್ಷಣಿಕ ಪ್ರಗತಿಯಲ್ಲಿ ಕನ್ನಡ ಅಧ್ಯಾಪಕರ ಪಾತ್ರ ಎಂದೆಂದಿಗೂ ವಿಶಿಷ್ಟವಾದುದು ಎಂದು ಕಾಸರಗೋಡು ಸರ್ಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಅಭಿಪ್ರಾಯ ವ್ಯಕ್ತಪಡಿಸಿದರು.
ಶನಿವಾರ ಬದಿಯಡ್ಕದ ಪೆರಡಾಲ ನವಜೀವನ ವಿದ್ಯಾಸಂಸ್ಥೆಯಲ್ಲಿ ನಡೆದ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕುಂಬಳೆ ಉಪಜಿಲ್ಲಾ ಘಟಕದ ಉಪಜಿಲ್ಲಾ ಮಹಾಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳನ್ನು ತಯಾರುಗೊಳಿಸುವಲ್ಲಿ ಶಿಕ್ಷಕರ ಪಾತ್ರ ವೈವಿಧ್ಯಮಯ ಹಾದಿಯಲ್ಲಿದೆ. ಅವರ ಹೆಗಲ ಮೇರಿರುವ ಜವಾಬ್ದಾರಿ ಒತ್ತಡದಿಂದ ಕೂಡಿದ್ದು, ಸವಾಲುಗಳೂ ಸಾಕಷ್ಟಿದೆ. ಗಡಿನಾಡು ಕಾಸರಗೋಡಿನಲ್ಲಿ ಕನ್ನಡದ ಉಳಿವಿಗೆ ಶಿಕ್ಷಕರ ನಿರಂತರ ಯತ್ನಗಳು ಶ್ಲಾಘನೀಯವಾದುದು. ಅತಿದೊಡ್ಡ ಸಂಘಟನೆಯಾಗಿ ಜನಪ್ರಿಯವಾಗಿರುವ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಸಂಘಟನಾತ್ಮಕ ಯೋಜನೆಗಳು ಸ್ತುತ್ಯರ್ಹವಾದುದು ಎಂದವರು ತಿಳಿಸಿದರು.
ಕುಂಬಳೆ ಉಪಜಿಲ್ಲಾ ಘಟಕದ ಅಧ್ಯಕ್ಷ ಡಾ.ಶ್ರೀಶಕುಮಾರ ಪಂಜಿತ್ತಡ್ಕ ಅಧ್ಯಕ್ಷತೆ ವಹಿಸಿ, ಕನ್ನಡ ಮಾಧ್ಯಮ ಅಧ್ಯಾಪಕ ಸಂಘಟನೆಯ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಶಶಿಧರ ಎಂ., ಪ್ರಾಂತ್ಯ ಅಧ್ಯಾಪಕ ಸಂಘದ ಅಧ್ಯಕ್ಷ ಸುಕೇಶ್, ಕೋಶಾಧಿಕಾರಿ ಶರತ್ ಕುಮಾರ್, ಕಾಸರಗೋಡು ಕನ್ನಡ ಸಾಹಿತ್ಯ ಮತ್ತು ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಸೂರ್ಯನಾರಾಯಣ ಬಿ., ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಸದಸ್ಯ ಪುರುಷೋತ್ತಮ ಭಟ್ ಕೆ., ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಪ್ರಾಂತ್ಯ ಅಧ್ಯಾಪಕ ಸಂಘದ ಸದಸ್ಯೆ ಪ್ರಭಾವತಿ ಕೆದಿಲಾಯ ಪುಂಡೂರು ಶುಭಾಶಂಸನೆಗೈದರು. ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭ ಎಲ್.ಎಸ್.ಎಸ್. ಹಾಗೂ ಯು.ಎಸ್.ಎಸ್. ಪರೀಕ್ಷೆಗಳಲ್ಲಿ ತೇರ್ಗಡೆಯಾದ ವಿವಿಧ ಶಾಲಾ ಕನ್ನಡ ಮರ್ಧಯಮ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.ವಾಚನ ವಾರಾಚರಣೆಯ ಅಂಗವಾಗಿ ನಡೆಸಿದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಉಪಜಿಲ್ಲಾ ಘಟಕದ ಕಾರ್ಯದರ್ಶಿ ನವಪ್ರಸಾದ್ ಕೆ. ಸ್ವಾಗತಿಸಿ, ಉಪಾಧ್ಯಕ್ಷೆ ವನಜ ಸಿ.ಎಚ್.ವಂದಿಸಿದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ಯಾಮಲಾ ಮವ್ವಾರು, ಶಾಲಿನಿ ಪಣಿಯೆ ಹಾಗೂ ನವೀನ್ ಕುಮಾರ್ ಪಿ. ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪ್ರತಿನಿಧಿ ಸಮಾವೇಶ ನಡೆಯಿತು.




.jpg)
.jpg)
