ಪಟ್ನಾ: ಮತ ಕಳ್ಳತನವನ್ನು ಶಾಶ್ವತವಾಗಿ ಕೊನೆಗೊಳಿಸಲು ಆಗಸ್ಟ್ 17ರಿಂದ ಬಿಹಾರದಲ್ಲಿ 'ವೋಟರ್ ಅಧಿಕಾರ ಯಾತ್ರೆ' ಹಮ್ಮಿಕೊಂಡಿರುವುದಾಗಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ರಾಹುಲ್ ಗಾಂಧಿ ವಿಡಿಯೊ ಸಂದೇಶ ಹಂಚಿಕೊಂಡಿದ್ದು, 'ಆಗಸ್ಟ್ 17ರಿಂದ ನಾವು ಬಿಹಾರದ ನೆಲದಲ್ಲಿ ಮತ ಕಳ್ಳತನದ ವಿರುದ್ಧ ನೇರ ಹೋರಾಟಕ್ಕಿಳಿಯಲಿದ್ದೇವೆ' ಎಂದು ಹೇಳಿದ್ದಾರೆ.
'ಇದು ಕೇವಲ ಚುನಾವಣೆಗೆ ಸಂಬಂಧಿಸಿದ್ದಲ್ಲ. ನಮ್ಮ ಪ್ರಜಾಪ್ರಭುತ್ವ, ನಮ್ಮ ಸಂವಿಧಾನ ಮತ್ತು 'ಒಬ್ಬ ವ್ಯಕ್ತಿ, ಒಂದು ಮತ' ಮೂಲ ತತ್ವವನ್ನು ರಕ್ಷಿಸುವುದಕ್ಕೆ ಸಂಬಂಧಪಟ್ಟದ್ದಾಗಿದೆ' ಎಂದು ಅವರು ತಿಳಿಸಿದ್ದಾರೆ.
'ದೇಶದ ಪ್ರತಿಯೊಂದು ಮತದಾರರ ಪಟ್ಟಿಯೂ ಸರಿಯಾಗುವವರೆಗೂ ನಾವು ಹೋರಾಟವನ್ನು ನಿಲ್ಲಿಸುವುದಿಲ್ಲ. ಯುವಕರು, ಕಾರ್ಮಿಕರು, ರೈತರು ಮತ್ತು ಪ್ರತಿಯೊಬ್ಬ ನಾಗರಿಕನೂ ಈ ಹೋರಾಟದಲ್ಲಿ ಕೈಜೋಡಿಸಬೇಕು' ಎಂದು ಮನವಿ ಮಾಡಿದ್ದಾರೆ.
'ಈ ಸಲ ಮತ ಕಳ್ಳತನ ನಡೆಸಿದವರಿಗೆ ಸೋಲಾಗಲಿದೆ. ಜನರು ಗೆಲುವು ಸಾಧಿಸಲಿದ್ದಾರೆ. ಸಂವಿಧಾನಕ್ಕೆ ಗೆಲುವುವಾಗಲಿದೆ' ಎಂದು ಹೇಳಿದ್ದಾರೆ.

