ಕುಂಬಳೆ: ಹಿರಿಯ ಸಂಶೋಧಕ, ತುಳು ಲಿಪಿ ಬ್ರಹ್ಮ ದಿ.ಪುಂಡೂರು ವೆಂಕಟರಾಜ ಪುಣಿಚಿತ್ತಾಯ ಅವರ ನೆನಪಲ್ಲಿ ಅಕ್ಟೋಬರ್ 11 ರಂದು ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರವು ಕೇರಳ ತುಳು ಅಕಾಡೆಮಿ ಸಹಯೋಗದಲ್ಲಿ ಹೊಸಂಗಡಿಯ ತುಳು ಅಕಾಡೆಮಿ ಸಭಾಂಗಣದಲ್ಲಿ ಆಯೋಜಿಸಿರುವ ಸಂಸ್ಮರಣೆ ಸಮಾರಂಭದಲ್ಲಿ ನೀಡಲಾಗುವ ಪ್ರತಿಷ್ಠಿತ 'ಪುವೆಂಪು ಪ್ರಶಸ್ತಿ 2025' ಕ್ಕೆ ಕನ್ನಡದ ಖ್ಯಾತ ಸಂಶೋಧಕ, ಪ್ರಾಧ್ಯಾಪಕ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರನ್ನು ಆಯ್ಕೆಮಾಡಲಾಗಿದೆ.
ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯವರಾಗಿದ್ದು, ಚಿಕ್ಕನಾಯಕನ ಹಳ್ಳಿ, ಮಧುಗಿರಿ, ಹೊಸದುರ್ಗ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ನಿವೃತ್ತರಾದವರು. ಅವರು ತುಮಕೂರು, ರಾಯಚೂರು ಸಹಿತ ವಿವಿಧೆಡೆ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.
ನಿವೃತ್ತಿಯ ಬಳಿಕ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ(2005-08), ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ(2017-19) ಕಾರ್ಯನಿರ್ವಹಿಸಿ ಜನಜನಿತರಾದವರು. ಕಾವ್ಯ, ನಾಟಕ, ವಿಮರ್ಶೆ, ಅನುಭವ ಕಥನ, ಪ್ರವಾಸ ಕಥನ,ಸಂಪಾದನಾ ಕೃತಿ, ಆತ್ಮಕತೆ ಸಹಿತ 50 ಕ್ಕಿಂತಲೂ ಹೆಚ್ಚು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಅವರ ಅನವರತ ಸಾಹಿತ್ಯ-ಸಂಶೋಧನಾ ಸೇವಎಗಳಿಗಾಗಿ ಪುತಿನ ಕಾವ್ಯ ಪ್ರಶಸ್ತಿ, ರಾಷ್ಟ್ರಕವಿ ಜಿ.ಎಸ್.ಎಸ್.ಕಾವ್ಯ ಪ್ರಶಸ್ತಿ, ಮಾಸ್ತಿ ಸಾಹಿತ್ಯ ಪ್ರಶಸ್ತಿ, ಫ.ಗು.ಹಳಕಟ್ಟಿ ಸಾಹಿತ್ಯ ಪ್ರಶಸ್ತಿ, ಅಮ್ಮ ಪ್ರಶಸ್ತಿ, ಬುಡಗಶ್ರೀ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮೊದಲಾದ ಗೌರವಾಭಿನಂದನೆಗಳು ಲಭಿಸಿವೆ.
ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಉದ್ಘಾಟಿಸುವರು. ಈ ವೇಳೆ ಪುವೆಂಪು ಸಂಸ್ಮರಣಾ ಪ್ರಶಸ್ತಿ-2025 ನ್ನು ಪ್ರದಾನ ಮಾಡಲಾಗುವುದು. ನಿವೃತ್ತ ಪ್ರಾಧ್ಯಾಪಕಿ ಡಾ.ಮೀನಾಕ್ಷಿ ರಾಮಚಂದ್ರ ಅವರು ಪುವೆಂಪು ಸಂಸ್ಮರಣಾ ಭಾಷಣ ಮಾಡಲಿರುವರು. ಶಾಸಕರು ಸಹಿತ ವಿವಿಧ ವಲಯಗಳ ಗಣ್ಯರು ಭಾಗವಹಿಸುವರು.




-PROF.S.G.SIDDARAMAYYA.jpeg)
