ಬದಿಯಡ್ಕ : ಬಳ್ಳಪದವು ವೀಣಾವಾದಿನಿ ಸಂಗೀತ ವಿದ್ಯಾಪೀಠದಲ್ಲಿ ಭಾನುವಾರ ಓಣಂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಗುರು ವಿದ್ವಾನ್ ಪೆರ್ಲ ಕೃಷ್ಣ ಭಟ್ ಅವರ ಸಂಸ್ಮರಣಾ ಕಾರ್ಯಕ್ರಮವೂ ನಡೆಯಿತು.
ಬೆಳಿಗ್ಗೆ ವಿದ್ಯಾರ್ಥಿಗಳು ಹೂಗಳಿಂದ ಪೂಕಳಂ ರಚಿಸಿ ಓಣಂಗೆ ಚಾಲನೆ ನೀಡಲಾಯಿತು. ವೀಣಾವಾದಿನಿಯ ನಿರ್ದೇಶಕ ವಿದ್ವಾನ್. ಯೋಗೀಶ ಶರ್ಮ ಬಳ್ಳಪದವು ದೀಪಪ್ರಜ್ವಲನೆಗೈದು ಅತಿಥಿಗಳನ್ನು ಸ್ವಾಗತಿಸಿದರು. ಅವರು ವಿದ್ವಾನ್ ಪೆರ್ಲ ಕೃಷ್ಣ ಭಟ್ ಅವರೊಂದಿಗಿನ ಗುರು-ಶಿಷ್ಯ ಸಂಬಂಧವನ್ನು ನೆನೆದು, ಅದರಿಂದ ಪಡೆದ ಶಕ್ತಿಯನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಪೆರ್ಲ ಕೃಷ್ಣ ಭಟ್ಟರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಯಕ್ಷಗಾನ, ಸಾಹಿತ್ಯ ಹಾಗೂ ವೀಣಾವಾದಿನಿಯ ಬೆಳವಣಿಗೆಯಲ್ಲಿ ಕೃಷ್ಣ ಭಟ್ ಅವರ ಕೊಡುಗೆಯನ್ನು ಸ್ಮರಿಸಲಾಯಿತು.
ಮುಖ್ಯ ಅತಿಥಿಯಾಗಿ ನ್ಯೂ ಪವರ್ ಟೆಕ್ ಎಂಜಿನಿಯರಿಂಗ್ ಸಂಸ್ಥೆಯ ಸಿಇಒ ಮನೋಜ್ ಕೆ.ಆರ್ ಉಪಸ್ಥಿತರಿದ್ದು, ಓಣಂ ಹಬ್ಬದ ಇತಿಹಾಸ ಹಾಗೂ ಕೇರಳದ ಸಂಸ್ಕøತಿಯ ವೈಭವದ ಕುರಿತು ಮಾತನಾಡಿದರು.
ಹಿರಿಯ ಯಕ್ಷಗಾನ ತಾಳಮದ್ದಳೆ ಕಲಾವಿದ ಕೋಟೆ ರಾಮ ಭಟ್ ಅವರು ಮಾತನಾಡಿ ಶಿಷ್ಯನನ್ನು ಶೂನ್ಯದಿಂದ ಶ್ರೇಷ್ಠನನ್ನಾಗಿ ರೂಪಿಸುವವನೇ ಗುರು ಎಂದು ತಿಳಿಸಿ, ಕೃಷ್ಣ ಭಟ್ ಅವರ ಜೀವನ ಶೈಲಿ ಮತ್ತು ಸಾಹಿತ್ಯಸಾಧನೆಯನ್ನು ನೆನಪಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ಪಿಲಿಂಗಲ್ಲು ಕೃಷ್ಣ ಭಟ್ ಅವರು ಗುರುವರ್ಯರ ಶಿಸ್ತಿನ ಜೀವನ ಹಾಗೂ ಸಂಸ್ಕೃತಿಬದ್ಧತೆಯನ್ನು ನೆನೆದು, ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು. ಪತ್ರಕರ್ತ ಅಖಿಲೇಶ್ ಯಾದವ್ ಹಾಗೂ ಪೆರ್ಲ ಕೃಷ್ಣ ಭಟ್ಟರ ಸುಪುತ್ರ ರಾಜಾರಾಮ ಪೆರ್ಲ ಶುಭ ಹಾರೈಸಿದರು.
ವಿದ್ಯಾರ್ಥಿಗಳು, ಪೋಷಕರು ಹಾಗೂ ಅಭಿಮಾನಿಗಳು ಸವಿಯಾದ ಓಣಂ ಹಬ್ಬದೂಟ "ಓಣಂ ಸದ್ಯ" ಸವಿದು ಹಬ್ಬದ ಸಂಭ್ರಮವನ್ನು ಹಂಚಿಕೊಂಡರು. ಅಪರಾಹ್ನ ವಿದುಷಿ ಮಧುಮಿತಾ ಪುತ್ತೂರು ಅವರ ವೀಣಾವಾದನ ಕಾರ್ಯಕ್ರಮ ನಡೆಯಿತು. ವೀಣಾವಾದಿನಿಯ ನಿರ್ದೇಶಕ ವಿದ್ವಾನ್ ಯೋಗೀಶ ಶರ್ಮ ಬಳ್ಳಪದವು ಸ್ವಾಗತಿಸಿ, ಕವನ ಮಂಗಳೂರು ಕಾರ್ಯಕ್ರಮ ನಿರೂಪಿಸಿದರು. ನವೀನ್ ಸರಳಾಯ ವಂದಿಸಿದರು.




.jpg)
.jpg)
