ಕಾಸರಗೋಡು: ಕಳೆದ ಎರಡು ತಿಂಗಳಿಂದ ನಡೆದುಬರುತ್ತಿರುವ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಐದನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆಯ ಸಮಾರೋಪ ಸಮಾರಂಭ ಶನಿವಾರ ಜರುಗಿತು.
ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ಶ್ರೀಮಠದ ಭಕ್ತರು, ಕಾರ್ಯಕರ್ತ ಬಂಧುಗಳ ತುಂಬು ಸಹಕಾರ ಹಾಗೂ ಶ್ರೀದೇವರ ಕೃಪೆಯಿಂದ ಚಾತುರ್ಮಾಸ್ಯ ಸಮಾರಂಭ ಯಶಸ್ವಿಯಾಗಿ ನೆರವೇರಲು ಸಹಕಾರಿಯಾಗಿದೆ. ಬ್ರಹ್ಮೈಕ್ಯ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರ ದೂರದರ್ಶಿತ್ವ ಹಾಗೂ ಅವರು ಹಾಕಿಕೊಟ್ಟಿರುವ ಸತ್ಪಥದಿಂದ ಶ್ರೀಮಠ ಅಭಿವೃದ್ಧಿಯ ಹಾದಿಯತ್ತ ಸಾಗುತ್ತಿದೆ. ಇದಕ್ಕೆ ದಾನಿಗಳು ಹಾಗೂ ಭಗವದ್ಭಕ್ತರ ಸಹಕಾರವೂ ಕಾರಣವಾಗಿರುವುದಾಗಿ ತಿಳಿಸಿದರು.
ಚಾತುರ್ಮಾಸ್ಯ ಸಮಿತಿ ಗೌರವಾಧ್ಯಕ್ಷ, ಡಾ. ಟಿ.ಶ್ಯಾಮ ಭಟ್ ಐ.ಎ.ಎಸ್, ಸಮಾರೋಪ ಭಾಷಣ ಮಾಡಿದರು. ಅದಾನಿ ಗ್ರೂಪ್ ಆಫ್ ಕಂಪೆನಿ ಅಧ್ಯಕ್ಷ, ಆಡಳಿತ ನಿರ್ದೇಶಕ ಕಿಶೋರ್ ಆಳ್ವ, ಉದ್ಯಮಿ ಕುಸುಮೋಧರ ಶೆಟ್ಟಿ ಮುಂಬೈ, ಕರ್ನಾಟಕ ಧಾರ್ಮಿಕ ಪರಿಷತ್ ಸಮಿತಿ ಸದಸ್ಯೆ ಮಲ್ಲಿಕಾ ಪಕ್ಕಳ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭ ಹಿರಿಯ ವಿಧ್ವಾಂಸ ಪಂಜ ಭಾಸ್ಕರ ಭಟ್ ಹಾಗೂ ಹಿರಿಯ ಯಕ್ಷಗಾನ ಕಲಾವಿದ ಪದ್ಯಾಣ ಶಂಕರನಾರಾಯಪಕ್ಕಳ ಅವರನ್ನು ಶ್ರೀಮಠದ ವತಿಯಿಮದ ಸ್ವಾಮೀಜಿ ಗೌರವಿಸಿ ಆಶೀರ್ವದಿಸಿದರು. ಕಲಾವಿದ ವಾಸುದೇವ ರಂಗಭಟ್ ಅಭಿನಂದನಾ ಭಾಷಣ ಮಾಡಿದರು. ರಾಜಾರಾಮ ಪೆರ್ಲ ಸನ್ಮಾನ ಪತ್ರ ವಾಚಿಸಿದರು.
ವ್ರತಾಚರಣೆ ಸಮಿತಿ ಅಧ್ಯಕ್ಷ, ಸ್ವರ್ಣೋದ್ಯಮಿ ಬಲರಾಮ ಆಚಾರ್ಯ ಪುತ್ತೂರು ಸ್ವಾಗತಿಸಿದರು. ದಾಮೋದರ ಶರ್ಮ ಬಾರ್ಕೂರು ಕಾರ್ಯಕ್ರಮ ನಿರೂಪಿಸಿದರು. ಶ್ರೀಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ ವಂದಿಸಿದರು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಘಿ ಯಕ್ಷಗಾನ ಬಯಲಾಟ ಜರುಗಿತು.
ಸೆ. 7ರಂದು ನಡೆಯಲಿರುವ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಸಮಾರೋಪ ಸಮಾರಂಭವನ್ನು ಒಂದು ದಿನ ಮುಂಚಿತವಾಗಿ ನೆರವೇರಿಸಲಾಗಿದ್ದು, ಸೆ. 7ರಂದು ಬೆಳಗ್ಗೆ ಮೃತ್ತಿಕಾ ವಿಸರ್ಜನೆ ಹಾಗೂ ಸೀಮೋಲ್ಲಂಘನ ಕಾರ್ಯಕ್ರಮದೊಂದಿಗೆ ಚಾತುರ್ಮಾಸ್ಯ ಸಮಾರಂಭ ಸಂಪನ್ನಗೊಳ್ಳಲಿದೆ.





