ಚೈಬಾಸಾ: ಜಾರ್ಖಂಡ್ನ ಪಶ್ಚಿಮ ಸಿಂಗ್ಭುಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಮಾವೋವಾದಿಯೊಬ್ಬನ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೋಲಿಕೆರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ಬೆಳಿಗ್ಗೆ ಎನ್ಕೌಂಟರ್ ನಡೆದಿದೆ.
ಮಾವೋವಾದಿಗಳು ಮತ್ತು ಭದ್ರತಾ ಪಡೆಗಳ ನಡುವೆ ಬೆಳಗಿನ ಜಾವ ಗುಂಡಿನ ಚಕಮಕಿ ನಡೆದಿದೆ ಎಂದು ಡಿಐಜಿ ಅನುರಂಜನ್ ಕಿಸ್ಪೊಟ್ಟಾ ಪಿಟಿಐಗೆ ತಿಳಿಸಿದ್ದಾರೆ.
ಹತ್ಯೆಯಾದ ಮಾವೋವಾದಿಯನ್ನು ಅಮಿತ್ ಹಂಸ್ದಾ ಅಲಿಯಾಸ್ ಆಪ್ತಾನ್ ಎಂದು ಗುರುತಿಸಲಾಗಿದೆ. ಈತ ಸಿಪಿಐ (ಎಂ)ನ ಸ್ವಯಂ ಘೋಷಿತ ವಲಯ ಕಮಾಂಡರ್ ಆಗಿದ್ದ. ಈತನ ಪತ್ತೆಗೆ ₹ 10 ಲಕ್ಷ ಬಹುಮಾನ ಘೋಷಿಸಲಾಗಿತ್ತು ಎಂದು ಜಾರ್ಖಂಡ್ ಪೊಲೀಸ್ ವಕ್ತಾರ ಪಿಟಿಐಗೆ ಮಾಹಿತಿ ನೀಡಿದ್ದಾರೆ.
ಸ್ಥಳದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದೂ ಅವರು ತಿಳಿಸಿದ್ದಾರೆ.




