ಬದಿಯಡ್ಕ: ವಿಶ್ವಯೋಗದಿನಾಚರಣೆಯ ಅಂಗವಾಗಿ ಸಾಂದೀಪನಿ ಯೋಗ ಸೇವಾಲಯ ಪಳ್ಳತ್ತಡ್ಕ, ಶಾರದಾ ಆಯುರ್ವೇದ ಆಸ್ಪತ್ರೆ ತಲಪಾಡಿ, ಭಾರತೀಯ ಮಜ್ದೂರ್ ಸಂಘ ಪೆರ್ಲ, ಬಾಲಗೋಕುಲ ಕಾಸರಗೋಡು ಜಿಲ್ಲೆ, ವಿವಿಧ ಭಜನಾ ತಂಡ ಯೋಗಕೇಂದ್ರ, ಶಾಲಾ ಕಾಲೇಜು ಇನ್ನಿತರ ಸಂಘಸಂಸ್ಥೆಗಳ ಸಹಯೋಗದೊಂದಿಗೆ ನಾಲ್ಕು ತಿಂಗಳ ಕಾಸರಗೋಡಿನ ವಿವಿಧ ಕಡೆಗಳಲ್ಲಿ ಸಾರ್ವಜನಿಕರಿಗೆ ಯೋಗ ತರಬೇತಿ, ಆರೋಗ್ಯ ಜಾಗೃತಿ ಶಿಬಿರ, ಪರಿಸರ ಸಂರಕ್ಷಣಾ ಮಾಹಿತಿ ಶಿಬಿರ,ಗೋಚಿಕಿತ್ಸಾ ಶಿಬಿರ, ಯೋಗ ತೆರಾಫಿ ಕಾರ್ಯಾಗಾರ, ಆಹಾರ ಮಾಹಿತಿ ಶಿಬಿರ, ಮಕ್ಕಳಿಗೆ ಸೂರ್ಯನಮಸ್ಕಾರದ ತರಬೇತಿ ಹಾಗೂ ಡ್ರಗ್ಸ್ ಮತ್ತು ಇನ್ನಿತರ ಮಾದಕ ವಸ್ತುಗಳ ಸೇವನೆಯ ಬಗ್ಗೆ ಜಾಗೃತಿ ಸಮಾವೇಶ `ಯೋಗಾಭಿನಮನಂ' ಸಮಾರೋಪ ಸಮಾರಂಭ ಭಾನುವಾರ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಜರಗಿತು.
ಕಾಸರಗೋಡು ಚಿನ್ಮಯ ಮಿಶನ್ನ ಬ್ರಹ್ಮಚಾರಿಣಿ ದಿಶಾ ಚೈತನ್ಯ ದೀಪ ಬೆಳಗಿಸಿ ಉದ್ಘಾಟಿಸಿದರು. ಅವರು ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯಲ್ಲಿ ಮೂರು ತರಹದ ವ್ಯಕ್ತಿತ್ವವಿದೆ. ಶಾರೀರಿಕ, ಮಾನಸಿಕ, ಬೌದ್ಧಿಕ ವ್ಯಕ್ತಿತ್ವಗಳು ಒಂದಕ್ಕೊಂದು ಪೂರಕವಾಗಿದ್ದಲ್ಲಿ ಜೀವನದಲ್ಲಿ ಪ್ರಗತಿಯನ್ನು ಸಾಸಲು ಸಾಧ್ಯವಿದೆ. ಸತತ ಯೋಗಾಭ್ಯಾಸ ವ್ಯಕ್ತಿಯನ್ನು ಸಮತೋಲದಲ್ಲಿಡಲು ಕಾರಣವಾಗುತ್ತದೆ. ದೈನಂದಿನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳುವುದು ಅವಶ್ಯವಾಗಿದೆ. ಸನಾತನ ಧರ್ಮವನ್ನು ಉಳಿಸಿಕೊಂಡು ಮುಂದುವರಿಯಲು ಸಮಾಜದಲ್ಲಿ ಐಕ್ಯತೆಯಿರಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಅಧ್ಯಾಪಕ ಪ್ರಭಾಕರನ್ ನಾಯರ್ ಮಾತನಾಡಿ, ಓರ್ವ ವ್ಯಕ್ತಿ ಉತ್ತಮ ನಾಗರಿಕನಾಗಲು ಪೋಷಕರು ಹಾಗೂ ಗುರುಗಳ ಮಾರ್ಗದರ್ಶನ ಕಾರಣವಾಗುತ್ತದೆ. ಮನೆಯಲ್ಲಿ ಹಾಗೂ ಶಾಲೆಯಲ್ಲಿನ ಶಾಂತಿಯ ವಾತಾವರಣವು ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ನಾಂದಿಯಾಗುತ್ತದೆ. ಕೌಟುಂಬಿಕ ಪದ್ಧತಿಯು ಶಿಥಿಲಾವಸ್ಥೆಯಲ್ಲಿರುವ ಈ ಕಾಲಘಟ್ಟದಲ್ಲಿ ನಮ್ಮ ಸಂಸ್ಕøತಿಯನ್ನು ಉಳಿಸಿ ಬೆಳೆಸಲು ಯೋಗವನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಅಧ್ಯಕ್ಷತೆ ವಹಿಸಿದ್ದರು. ಯೋಗ ಶಿಕ್ಷಕಿ ದಿವ್ಯ ಶರ್ಮ ಪಳ್ಳತ್ತಡ್ಕ ಸ್ವಾಗತಿಸಿ, ಯಂ.ಬಿ.ಲೋಕೇಶ್ ಆಚಾರ್ ಕಂಬಾರು ವಂದಿಸಿದರು. ವಿದ್ಯಾರ್ಥಿಗಳಿಂದ ಸಾಮೂಹಿಕ ಸೂರ್ಯನಮಸ್ಕಾರ ಯಜ್ಞ ಮತ್ತು ದಿವ್ಯಚಕ್ಷು, ನೃತ್ಯಯೋಗ ಪ್ರದರ್ಶನ ನಡೆಯಿತು.




.jpg)
