ಕಾಸರಗೋಡು: ಜಿಲ್ಲೆಯ ವಿವಿಧೆಡೆ ನಡೆಸಿದ ಕಾರ್ಯಾಚರಣೆಯಲ್ಲಿ ನಿಷೇಧಿತ ಏಕ ಬಳಕೆಯ ಗ್ಲಾಸ್ಗಳು, ತಟ್ಟೆಗಳು, ಕವರ್ಗಳು ಮತ್ತು ನಿಷೇಧಿತ ನೀರಿನ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಗಟು ವ್ಯಾಪಾರಿಗಳನ್ನು ಕೇಂದ್ರೀಕರಿಸಿ ನಡೆಸಿದ ತಪಾಸಣೆಯಲ್ಲಿ, ಜಿಲ್ಲಾ ಎನ್ಫೋರ್ಸ್ಮೆಂಟ್ ನಡೆಸಿದ ದಾಳಿಯಲ್ಲಿ ವಿವಿಧ ಗೋದಾಮುಗಳಿಂದ 3350 ಕೆಜಿ ನಿಷೇಧಿತ ಉತ್ಪನ್ನಗಳನ್ನು ವಶಪಡಿಸಿಕೊಂಡು ಎಂಸಿಎಫ್ಗೆ ವರ್ಗಾಯಿಸಿದೆ.
ಉಪ್ಪಳದಲ್ಲಿ ಪಾಕಿಂಗ್ ಸಂಸ್ಥೆಯೊಂದರ ಗೋದಾಮಿಗೆ ದಾಳಿ ನಡೆಸಿದ ಅಧಿಕಾರಿಗಳ ತಂಡ ನಿಷೇಧಿತ ಉತ್ಪನ್ನಗಳನ್ನು ವಶಪಡಿಸಿಕೊಂಡಿದೆ. ಮುಟ್ಟಂ ಗೇಟ್ನಲ್ಲಿರುವ ಅಂಗಡಿ, ಗೋದಾಮು, ಬಂದ್ಯೋಡಿನ ಪ್ಯಾಕಿಂಗ್ ಅಂಗಡಿ, ಹೈಪರ್ಮಾರ್ಕೆಟ್ ಮತ್ತು ಚೆರುವತ್ತೂರಿನ ವ್ಯಾಪಾರಿ ಮಳಿಗೆಗಳಿಂದ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಅಂಗಡಿ ಮಾಲೀಕರಿಗೆ ತಲಾ 10,000 ರೂ. ದಂಡ ವಿಧಿಸಲಾಗಿದೆ ಉಪ್ಪಳದಲ್ಲಿರುವ ಮಲ್ಟಿ ಫಂಕ್ಷನ್ ಹಾಲ್ ಒಂದರಲ್ಲಿ ಕುಡಿಯುವ ನೀರಿನ ಬಳಕೆಗೆ ನಿಷೇಧಿತ ಗ್ಲಾಸ್ ಬಳಸಿರುವು ಹಿನ್ನೆಲೆಯಲ್ಲಿ ಮಾಲೀಕರಿಗೆ 10,000 ರೂ. ದಂಡ ವಿಧಿಸಲಾಗಿದೆ. ಕಾಞಂಗಾಡಿನ ಶಾಪಿಂಗ್ ಕಾಂಪ್ಲೆಕ್ಸ್ಗಳ ಮಾಲೀಕರಿಗೆ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳದಲ್ಲಿ ಸುರಿದ ಕಾರಣಕ್ಕಾಗಿ 5,000 ರೂ. ದಂಡ ವಿಧಿಸಲಾಯಿತು.
ಎನ್ಫೋರ್ಸ್ಮೆಂಟ್ ಜಿಲ್ಲಾ ಅಧಿಕಾರಿ ಕೆ.ವಿ. ಮುಹಮ್ಮದ್ ಮದನಿ, ಇತರ ಅಧಿಕಾರಿಗಳಾದ ಟಿ.ಸಿ.ಶೈಲೇಶ್, ಸಹಾಯಕ ಕಾರ್ಯದರ್ಶಿ ಅನು ಅಜಯನ್, ಜಂಟಿ ಬಿಡಿಒ ಎಂ.ಗಂಗಾಧರನ್, ವಿಇಒ ಜಾನ್ಸನ್, ಆರೋಗ್ಯ ನಿರೀಕ್ಷಕ ರಜನಿ ಕೆ, ಜಿಇಒ ಷರೀಫ್ ಕಾರ್ಯಾಚರಣೆ ನೇತೃತ್ವ ವಹಿಸಿದ್ದರು.

