ಉಪ್ಪಳ: ವಿದ್ಯಾರ್ಥಿಗಳ ಸುಪ್ತ ಪ್ರತಿಭೆಗಳನ್ನು ಅನಾವರಣಗೊಳಿಸುವ ಶಾಲಾ ಕಲೋತ್ಸವಗಳು ಶಿಕ್ಷಣದ ಜೊತೆಗೆ ವೈಯುಕ್ತಿಕ ಸಾಮಥ್ರ್ಯ ಪ್ರದರ್ಶನಕ್ಕೆ ಅತ್ಯುತ್ತಮ ವೇದಿಕೆಯಾಗಿದೆ. ಬಹುಭಾಷೆಗಳ ಸಂಗಮ ಭೂಮಿಯಾದ ಮಂಜೇಶ್ವರ ಉಪಜಿಲ್ಲಾ ವ್ಯಾಪ್ತಿಯ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಪೂರಕವಾಗಿ ಇಲ್ಲಿಯ ಶಾಲೆಗಳು, ವಿದ್ಯಾಭಿಮಾನಿಗಳು ನೀಡುತ್ತಿರುವ ಬೆಂಬಲ ಸ್ತುತ್ಯರ್ಹವಾದುದು ಎಂದು ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ತಿಳಿಸಿದರು.
ಪೈವಳಿಕೆ ನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮಂಗಳವಾರ ಆರಂಭಗೊಂಡ ಮಂಜೇಶ್ವರ ಉಪಜಿಲ್ಲಾ ಮಟ್ಟದ 64ನೇ ಶಾಲಾ ಕಲೋತ್ಸವನ್ನು ದೀಪ ಬೆಳಗಿಸಿ ಮತ್ತು ಲಾಂಛನ ಬಿಡುಗಡೆಗೊಳಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಸ್ಪರ್ಧೆಗಳನ್ನು ಸ್ಪರ್ಧೆಗಳಾಗಿ ಕಾಣಬೇಕು. ಅವಕಾಶಗಳು ಭವಿಷ್ಯದಲ್ಲಿ ಸಾಕಷ್ಟು ಲಭ್ಯವಾಗುತ್ತದೆ. ತೀರ್ಪುಗಾರರ ತೀರ್ಮಾನಗಳಿಗೆ ಬದ್ಧರಾಗಿ ಕಲೋತ್ಸವವನ್ನು ಯಶಸ್ವಿಗೊಳಿಸುವ ಹೊಣೆ ಎಲ್ಲರ ಮೇಲಿದೆ ಎಂದವರು ಈ ಸಂದರ್ಭ ಸೂಚಿಸಿದರು.
ಪೈವಳಿಕೆ ಗ್ರಾ.ಪಂ.ಅಧ್ಯಕ್ಷೆ ಜಯಂತಿ ಕೆ. ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಜಿ.ಪಂ.ಉಪಾಧ್ಯಕ್ಷ ಶಾನವಾಸ್ ಪಾದೂರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಜೋರ್ಜ್ ಕ್ರಾಸ್ತಾ ಪ್ರಾಸ್ತಾವಿಕವಾಗಿ ಮಾತನಾಡಿ ಕಲೋತ್ಸವದ ಸಮಗ್ರ ಮಾಹಿತಿಗಳನ್ನು ನೀಡಿದರು. ಜಿ.ಪಂ.ಸದಸ್ಯೆ ಕಮಲಾಕ್ಷಿ, ಗೋಲ್ಡನ್ ಅಬ್ದುಲ್ ರಹಮಾನ್, ನಾರಾಯಣ ನಾಯ್ಕ್, ಗ್ರಾ.ಪಂ.ಉಪಾಧ್ಯಕ್ಷೆ ಪುಷ್ಪಲಕ್ಷ್ಮೀ ಎನ್., ಕಣ್ಣೂರು ವಿಭಾಗ ವಿದ್ಯಾಭ್ಯಾಸ ನಿರ್ದೇಶಕ ವಿನೋದ್ ಕುಮಾರ್ ಎ.ಕೆ., ಸಹಾಯಕ ನಿರ್ದೇಶಕಿ ಉದಯಕುಮಾರಿ ಇ.ಆರ್., ಕಾಸರಗೋಡು ಜಿಲ್ಲಾ ವಿದ್ಯಾಭ್ಯಾಸ ನಿರ್ದೇಶಕಿ ಸವಿತ, ಶಾಲಾ ಪ್ರಾಂಶುಪಾಲ ರಘುರಾಮ ಆಳ್ವ ಕೆ.ಬಿ., ಸಹಿತ ವಿವಿಧ ರಾಜಕೀಯ ಪ್ರತಿನಿಧಿಗಳು, ಸ್ಥಳೀಯಾಡಳಿತ ಪ್ರತಿನಿಧಿಗಳು, ರಕ್ಷಕ-ಶಿಕ್ಷಕ ಸಂಘ, ಮಾತೃ ಸಮಿತಿ, ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು, ವಿವಿಧ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಲೋತ್ಸವ ಸಮಿತಿ ಸಂಚಾಲಕ, ಪ್ರಭಾರ ಪ್ರಾಂಶುಪಾಲ ವಿಶ್ವನಾಥ ಕೆ.ಸ್ವಾಗತಿಸಿ, ಅನೀಶ್ ಕೆ. ವಂದಿಸಿದರು. ಬೆಳಿಗ್ಗೆ ಉಪಜಿಲ್ಲಾ ವಿದ್ಯಾಧಿಕಾರಿ ಜೋರ್ಜ್ ಕ್ರಾಸ್ತಾ ಧ್ವಜಾರೋಹಣಗೈದರು. ಅ.30ರ ವರೆಗೆ ನಡೆಯುವ ಉಪಜಿಲ್ಲಾ ಶಾಲಾ ಕಲೋತ್ಸವದಲ್ಲಿ ಉಪಜಿಲ್ಲೆಯ ಸುಮಾರ್ 118 ಶಾಲೆಗಳ 4,700ಕ್ಕೂ ಮಿಕ್ಕಿದ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ.
ಊಟೋಪಚಾರ:
ಕಲೋತ್ಸವದ ಎಲ್ಲಾ ದಿನಗಳಲ್ಲೂ ಭಾಗವಹಿಸುವ ವಿದ್ಯಾರ್ಥಿಗಳು, ಶಿಕ್ಷಕರು, ಮಕ್ಕಳ ಹೆತ್ತವರಿಗೆ ಬೆಳಿಗ್ಗಿನ ಉಪಾಹಾರ, ಮಧ್ಯಾಹ್ನ ಭೋಜನ, ಸಂಜೆಯ ಲಘು ಉಪಾಹಾರ ವ್ಯವಸ್ಥೆಗೊಳಿಸಲಾಗಿದೆ. ಕುಡಿಯುವ ನೀರು, ಆಹಾರ, ಶಿಸ್ತು, ನೈರ್ಮಲ್ಯ, ಆರೋಗ್ಯ, ವೇದಿಕೆ, ಧ್ವನಿ ಮತ್ತು ಬೆಳಕು ಮೊದಲಾದ ವಿಭಾಗಗಳಲ್ಲಿ ಪೈವಳಿಕೆ ನಗರ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರ ಸ್ವತಂಸೇವಕ ತಂಡ ನಿರಂತರ ಕಾರ್ಯನಿರ್ವಹಿಸುತ್ತಿದೆ. ಸ್ಥಳೀಯ ಸಾರ್ವಜನಿಕರೂ ಕೈಜೋಡಿಸಿದ್ದಾರೆ.
ಉತ್ಸವ ನಗರಿ:
ಪೈವಳಿಕೆ ನಗರ ಅಚ್ಚ ಕನ್ನಡಿಗರೇ ಅತೀ ಹೆಚ್ಚಿರುವ ಪ್ರದೇಶವಾಗಿದ್ದು, ಕಲೆ, ಸಾಹಿತ್ಯಕ್ಕೆ ಆಡುಂಬೋಲದಂತಿದೆ. ಕಲೋತ್ಸವ ಹಿನ್ನೆಲೆಯಲ್ಲಿ ಪೈವಳಿಕೆ ನಗರ ವಿಶೇಷ ಅಲಂಕೃತ ಪೇಟೆಯಾಗಿದ್ದು, ಅಕ್ಷರಶಃ ಉತ್ಸವ ನಗರಿಯಾಗಿ ಮಾರ್ಪಟ್ಟಿದೆ.

.jpg)
.jpg)
.jpg)
.jpg)
.jpg)
