ಹೈದರಾಬಾದ್: ಸೌದಿ ಅರೇಬಿಯಾದ ಮದೀನಾದಲ್ಲಿ ನಡೆದ ಭೀಕರ ಬಸ್ ಅಪಘಾತದಲ್ಲಿ ಒಟ್ಟು 45 ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ ಹೈದರಾಬಾದ್ನ ಒಂದೇ ಕುಟುಂಬ ಮೂರು ತಲೆಮಾರಿನ 18 ಮಂದಿಯೂ ಸಜೀವ ದಹನವಾಗಿದ್ದಾರೆ.
ಮೃತಪಟ್ಟ 18 ಮಂದಿ ಕುಟುಂಬ ಸದಸ್ಯರಲ್ಲಿ 9 ಮಕ್ಕಳೂ ಸೇರಿದ್ದಾರೆ.
ನ.9ರಂದು ಹೈದರಾಬಾದ್ನ ನಿವಾಸಿ, ಸೈಯದ್ ನಸೀರುದ್ದೀನ್ ಅವರು ಪತ್ನಿ, ಮಕ್ಕಳು, ಅಳಿಯಂದಿರು ಮತ್ತು ಮೊಮ್ಮಕ್ಕಳೊಂದಿಗೆ ಉಮ್ರಾ ಯಾತ್ರೆಗೆ ತೆರಳದಿದ್ದರು. ಆದರೆ ಯಾತ್ರೆಯಿಂದ ವಾಪಸ್ ಆಗಲೇ ಇಲ್ಲ. ಸೈಯದ್ ಅವರ ಒಬ್ಬ ಮಗ ಅಮೆರಿಕದಲ್ಲಿರುವುದರಿಂದ ಈ ಯಾತ್ರೆಗೆ ಹೋಗಿರಲಿಲ್ಲ, ಉಳಿದಂತೆ ಬಹುತೇಕ ಕುಟುಂಬ ಹೋಗಿತ್ತು ಅವರ ಮನೆಗೆ ಬೀಗ ಹಾಕಿರುವುದು ಹಾಗೆಯೇ ಇದೆ ಎಂದು ಸೈಯದ್ ಅವರ ಸಂಬಂಧಿಕರೊಬ್ಬರು ಹೇಳಿರುವುದಾಗಿ ವರದಿಯಾಗಿದೆ.
ಮಕ್ಕಾದಿಂದ ಮದೀನಾಕ್ಕೆ ಉಮ್ರಾ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ ಡೀಸೆಲ್ ಸಾಗಾಟದ ಟ್ಯಾಂಕರ್ಗೆ ಡಿಕ್ಕಿಯಾಗಿ ಹೊತ್ತಿ ಉರಿದಿದ್ದು, ಭಾರತೀಯ ಕಾಲಮಾನ ಸೋಮವಾರ ಬೆಳಿಗ್ಗೆ 4ಕ್ಕೆ ದುರಂತ ಸಂಭವಿಸಿದೆ. ಟ್ಯಾಂಕರ್ಗೆ ಅಪ್ಪಳಿಸಿದ ಬಸ್ಗೆ ಕ್ಷಣಾರ್ಧದಲ್ಲಿ ಬೆಂಕಿ ಆವರಿಸಿದ್ದು, ಪ್ರಯಾಣಿಕರು ಸಜೀವ ದಹನಗೊಂಡಿದ್ದಾರೆ.




