ನವದೆಹಲಿ: ಈ ಹಿಂದೆ ಪುಲ್ವಾಮದಲ್ಲಿ ಸಂಭವಿಸಿದ ಉಗ್ರರ ದಾಳಿಗೆ ಪ್ರತಿಕಾರವಾಗಿ ಪಾಕಿಸ್ತಾನ ಹಾಗೂ ಪಿಒಕೆಯಲ್ಲಿ ಭಾರತದ ಸೇನಾಪಡೆ ನಡೆಸಿದ ಆಪರೇಷನ್ ಸಿಂಧೂರ್ ಮಾದರಿಯಲ್ಲೇ ಮತ್ತೊಂದು ಕಾರ್ಯಾಚರಣೆಗೆ ಸೇನಾಪಡೆಗಳು ಸಜ್ಜಾಗಿವೆ.
ಸೋಮವಾರ ಸಂಜೆ ದೆಹಲಿಯ ಪ್ರತಿಷ್ಠಿತ ಕೆಂಪುಕೋಟೆ ಬಳಿ ಕಾರ್ ಬಾಂಬ್ ಸ್ಫೋಟ ಸಂಭವಿಸಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಉಗ್ರರ ಹೆಡೆಮುರಿ ಕಟ್ಟಲು ಪಣತೊಟ್ಟಿದೆ.
ಬುಧವಾರ ಸಂಜೆ ಪ್ರಧಾನಿ ನರೇಂದ್ರಮೋದಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದೆ. ಸಭೆಗೆ ಮೂರು ಸೇನಾಪಡೆಗಳ ಮುಖ್ಯಸ್ಥರು, ರಾಷ್ಟ್ರೀಯ ಭದ್ರತಾ ಸಲಹೆಗಾರ, ಗುಪ್ತಚರ ವಿಭಾಗ ಸೇರಿದಂತೆ ಎಲ್ಲಾ ಹಿರಿಯ ಅಧಿಕಾರಿಗಳ ಸಭೆ ಕರೆಯಲಾಗಿದೆ.
ಪ್ರಕರಣ ಕುರಿತಂತೆ ಕೂಲಂಕುಷವಾಗಿ ಮಾಹಿತಿ ಪಡೆಯಲಿರುವ ಪ್ರಧಾನಿ ನರೇಂದ್ರಮೋದಿ ಅವರು ಮುಂದೆ ಕೈಗೊಳ್ಳಬೇಕಾದ ಕಾರ್ಯಾಚರಣೆ ಕುರಿತು ಮಾಹಿತಿ ಪಡೆಯಲಿದ್ದಾರೆ.
ಈ ದಾಳಿಯ ಹಿಂದೆ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಷ್-ಎ-ಮೊಹಮದ್ ಕೈವಾಡವಿದೆ ಎಂದು ತನಿಖಾ ಸಂಸ್ಥೆಗಳು ಶಂಕೆ ವ್ಯಕ್ತಪಡಿಸಿದೆ. ಆದರೆ ಈ ಕೃತ್ಯ ವೈದ್ಯಕೀಯ ವೃತ್ತಿಯಲ್ಲಿರುವ ಮೂವರು ವೈದ್ಯರು ಮತ್ತು ಒಬ್ಬ ಮಹಿಳಾ ವೈದ್ಯೆಯ ಸಹಾಯದೊಂದಿಗೆ ನಡೆದಿದೆ ಎನ್ನಲಾಗಿದೆ.
ತನಿಖೆಯ ಪ್ರಾಥಮಿಕ ವರದಿಗಳ ಪ್ರಕಾರ, ಡಾ.ಉಮರ್, ಡಾ. ಮುಜಾಮಿಲ್ ಮತ್ತು ಡಾ.ಆದಿಲ್ ಸ್ಫೋಟದಲ್ಲಿ ಭಾಗಿಯಾದ ಮುಖ್ಯ ಆರೋಪಿಗಳು. ಇವರೆಲ್ಲರೂ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಇವರ ನಿಜವಾದ ಗುರುತು ಜೈಷ್-ಎ-ಮೊಹಮದ್ ಸಕ್ರಿಯ ಸ್ಲೀಪರ್ ಸೆಲ್ ಸದಸ್ಯರು ಎಂಬುದು ಬಯಲಾಗಿದೆ.
ಈ ಮೂವರು ವೈದರು ದೆಹಲಿಯ ಜನದಟ್ಟಣೆಯ ಪ್ರದೇಶದಲ್ಲಿ ಬಾಂಬ್ ಇಟ್ಟು, ದೂರ ನಿಯಂತ್ರಣದ ಮೂಲಕ ಸ್ಫೋಟಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಸ್ಫೋಟದಲ್ಲಿ 12 ಮಂದಿ ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.ಈ ಪುರುಷ ವೈದ್ಯರಿಗೆ ಮಹಿಳಾ ವೈದ್ಯೆ ಡಾ. ಶಾಹೀನಾ ನೆರವು ನೀಡಿದ್ದಾರೆ ಎಂದು ಹೇಳಲಾಗಿದೆ. ಡಾ.ಶಾಹೀನಾ ದೆಹಲಿಯ ಪ್ರಿತಷ್ಠಿತ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, ಆಕೆಯ ಮೂಲಕವೇ ಬಾಂಬ್ ತಯಾರಿಕೆಗೆ ಅಗತ್ಯ ವಸ್ತುಗಳು ಮತ್ತು ಮಾಹಿತಿ ಸಂಗ್ರಹವಾಗಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಈ ಘಟನೆಗೆ ಭಾರತೀಯ ವಾಯುಪಡೆಯ ಆಪರೇಷನ್ ಸಿಂಧೂರಕ್ಕೆ ನೇರ ಪ್ರತೀಕಾರವೇ ಎಂದು ಅನುಮಾನ ವ್ಯಕ್ತವಾಗಿದೆ. ಆಪರೇಷನ್ ಸಿಂಧೂರ ವೇಳೆ (2025ರ ಮೇ ತಿಂಗಳಲ್ಲಿ) ಭಾರತೀಯ ವಾಯುಪಡೆ ಪಾಕಿಸ್ತಾನದ ಬಹಾವಲ್ಪುರ ಪ್ರದೇಶದ ಮೇಲೆ ದಾಳಿ ನಡೆಸಿತ್ತು. ಬಹಾವಲ್ಪುರದಲ್ಲಿ ಜೈಷ್-ಎ-ಮೊಹಮದ್ನ ಪ್ರಮುಖ ತರಬೇತಿ ಶಿಬಿರವೊಂದನ್ನು ಸಂಪೂರ್ಣ ಧ್ವಂಸಗೊಳಿಸಲಾಗಿತ್ತು.
ಈ ದಾಳಿಯಲ್ಲಿ ಜೈಷ್ ಮುಖ್ಯಸ್ಥ ಮಸೂದ್ ಅಜರ್ನ ಸಮೀಪದ ಸಂಬಂಧಿಕರು ಸೇರಿದಂತೆ ಹಲವು ಉಗ್ರರನ್ನು ಕೊಲ್ಲಲಾಗಿತ್ತು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಜೈಷ್ ಸಂಘಟನೆಯು ತನ್ನ ಸ್ಲೀಪರ್ ಸೆಲ್ಗಳನ್ನು ಸಕ್ರಿಯಗೊಳಿಸಿ, ದೆಹಲಿಯಲ್ಲಿ ದಾಳಿ ನಡೆಸಿರಬಹುದು ಎಂದು ಮೂಲಗಳು ತಿಳಿಸಿವೆ.
ನವದೆಹಲಿ,ನ.11- ಈ ಹಿಂದೆ ಪುಲ್ವಾಮದಲ್ಲಿ ಸಂಭವಿಸಿದ ಉಗ್ರರ ದಾಳಿಗೆ ಪ್ರತಿಕಾರವಾಗಿ ಪಾಕಿಸ್ತಾನ ಹಾಗೂ ಪಿಒಕೆಯಲ್ಲಿ ಭಾರತದ ಸೇನಾಪಡೆ ನಡೆಸಿದ ಆಪರೇಷನ್ ಸಿಂಧೂರ್ ಮಾದರಿಯಲ್ಲೇ ಮತ್ತೊಂದು ಕಾರ್ಯಾಚರಣೆಗೆ ಸೇನಾಪಡೆಗಳು ಸಜ್ಜಾಗಿವೆ. ಸೋಮವಾರ ಸಂಜೆ ದೆಹಲಿಯ ಪ್ರತಿಷ್ಠಿತ ಕೆಂಪುಕೋಟೆ ಬಳಿ ಕಾರ್ ಬಾಂಬ್ ಸ್ಫೋಟ ಸಂಭವಿಸಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಉಗ್ರರ ಹೆಡೆಮುರಿ ಕಟ್ಟಲು ಪಣತೊಟ್ಟಿದೆ.




