ಢಾಕಾ: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರಿಗೆ ಮರಣ ದಂಡನೆ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದ ಬಳಿಕ ದೇಶದಾದ್ಯಂತ ಪರಿಸ್ಥಿತಿ ಶಾಂತವಾಗಿದ್ದರೂ, ಪ್ರಮುಖ ನಗರಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಈ ನಡುವೆ ಹಸೀನಾ ಅವರಿಗೆ ಮರಣದಂಡನೆ ವಿಧಿಸಿರುವುದನ್ನು ವಿರೋಧಿಸಿ ಅವಾಮಿ ಲೀಗ್ ಪಕ್ಷ ಸಂಪೂರ್ಣ ಬಂದ್ ಘೋಷಿಸಿದೆ.
ತೀರ್ಪು ಬಂದಾಗಿನಿಂದ ಈವರೆಗೆ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ. ಆದರೆ, ಯಾವುದೇ ಸಮಯದಲ್ಲಿ ಗಲಭೆ ಉಂಟಾಗುವ ಸಾಧ್ಯತೆ ಇರುವ ಕಾರಣ ವಾಹನ ಸಂಚಾರ ಕಡಿಮೆಯಾಗಿದ್ದು, ಜನರೂ ಮನೆಯಿಂದ ಹೊರಬರುತ್ತಿಲ್ಲ. ಶಾಲಾ ಕಾಲೇಜುಗಳಲ್ಲಿ ಹಾಜರಾತಿ ಕಡಿಮೆಯಾಗಿದ್ದು, ಕಚೇರಿಗಳಲ್ಲೂ ಸಿಬ್ಬಂದಿ ಗೈರಾಗಿದ್ದಾರೆ ಎಂದು ವರದಿಯಾಗಿದೆ.
ಮುಂಜಾಗ್ರತಾ ಕ್ರಮವಾಗಿ ಶಸ್ತ್ರಸಜ್ಜಿತ ಪೊಲೀಸರು, ಕ್ಷಿಪ್ರ ಕಾರ್ಯಾಚರಣೆಯ ಬೆಟಾಲಿಯನ್ ಸಿಬ್ಬಂದಿ ಮತ್ತು ಅರೆಸೈನಿಕ ಘಟಕಗಳು, ವಿಶೇಷವಾಗಿ ಸರ್ಕಾರಿ ಕಟ್ಟಡಗಳು, ಪಕ್ಷದ ಕಚೇರಿಗಳು ಮತ್ತು ಪ್ರಮುಖ ವೃತ್ತಗಳಲ್ಲಿ ದಿನದ 24 ಗಂಟೆಯೂ ಗಸ್ತು ತಿರುಗುತ್ತಿದ್ದಾರೆ.
ಅವಾಮಿ ಲೀಗ್ ಪಕ್ಷ ನ.19-21ರವರೆಗೆ ದೇಶದಾದ್ಯಂತ ಬಂದ್ ಮಾಡಿ, ಪ್ರತಿಭಟನೆ ನಡೆಸುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದೆ.
2024ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ದಂಗೆಯ ಸಂದರ್ಭದಲ್ಲಿ ಅಲ್ಲಿನ ಆಗಿನ ಪ್ರಧಾನಿ ಶೇಖ್ ಹಸೀನಾ 'ಮಾನವೀಯತೆ ವಿರುದ್ಧ ಅಪರಾಧ ಎಸಗಿದ್ದಾರೆ' ಎಂದು ತೀರ್ಮಾನಿಸಿರುವ ಬಾಂಗ್ಲಾದೇಶದಲ್ಲಿರುವ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯು, 78 ವರ್ಷದ ಹಸೀನಾ ಅವರಿಗೆ ಸೋಮವಾರ ಮರಣ ದಂಡನೆ ವಿಧಿಸಿದೆ.




