ಕಾಸರಗೋಡು: ನಗರದ ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ 41 ದಿನಗಳ ಮಂಡಲ ಭಜನಾ ಸಂಕೀರ್ತನೆ ಸೋಮವಾರ ಆರಂಭಗೊಂಡಿತು. ಒಡಿಯೂರು ಗುರುದೇವದತ್ತ ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದಮಯಿ ಭಜನಾ ಸಂಕೀರ್ತನೆ ಉದ್ಘಾಟಿಸಿ ಆಶೀರ್ವಚನ ನೀಡಿ, ದೇವರ ಸಾಕ್ಷಾತ್ಕಾರಕ್ಕೆ ಭಜನೆ ಸುಲಭ ಹಾದಿಯಾಗಿದ್ದು, ಭಗವಂತನ ದಾಸನಾಗಲು ಇದು ಸಹಕಾರಿ ಎಂದು ತಿಳಿಸಿದರು. ಶಬರಿಮಲೆಯಲ್ಲಿ ಚಿನ್ನ ಕಳವು ಪ್ರಕರಣ ಭಕ್ತಸಮೂಹಕ್ಕೆ ಘಾಸಿ ತಂದೊಡ್ಡಿದೆ. ಈ ಹಿಂದೆ ಆಚಾರ ಸಂಪ್ರದಾಯ ಉಲ್ಲಂಘನೆಯಿಂದ ಶಬರಿಮಲೆ ಪಾವಿತ್ರ್ಯಕ್ಕೆ ಧಕ್ಕೆಯುಂಟಾಗಿದ್ದು, ಇದರ ವಿರುದ್ಧ ನಡೆದ ಐತಿಹಾಸಿಕ ಹೋರಾಟದಲ್ಲಿ ಕಾಸರಗೋಡಿನ ಮಹಿಳೆಯರ ಪಾತ್ರ ಮಹತ್ವದ್ದಾಗಿತ್ತು. ಶಬರಿಮಲೆಯಲ್ಲಿ ನಡೆಯುತ್ತಿರುವ ಅನಾಚಾರಗಳಿಗೆ ಕಾರಣರಾದವರಿಗೆ ಸಂಕಷ್ಟ ತಪ್ಪದು. ಆದರೆ ಶಬರಿಮಲೆಯ ದೇವಸಾನ್ನಿಧ್ಯಕ್ಕೆ ಎಂದಿಗೂ ಚ್ಯುತಿ ಉಂಟಾಗದು ಎಂದು ತಿಳಿಸಿದರು.
ಕ್ಷೇತ್ರದ ತಂತ್ರವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ದಿವ್ಯ ಉಪಸ್ಥಿತರಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ ತಾಲೂಕು ಸಮಿತಿ ಅಧ್ಯಕ್ಷ ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ, ಗೌರವಾಧ್ಯಕ್ಷ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಚೆನ್ನಿಕ್ಕರೆ ಅಧ್ಯಕ್ಷತೆ ವಹಿಸಿದ್ದರು. ದೇವಾಲಯ ಟ್ರಸ್ಟ್ ಅಧ್ಯಕ್ಷ ಗಣೇಶ ಅಮೈ ಮತ್ತು ಮಹಿಳಾ ಸಮಿತಿ ಅಧ್ಯಕ್ಷೆ ಶೋಭಾ ರವೀಂದ್ರ ನಾಯ್ಕ್ ಉಪಸ್ಥಿತರಿದ್ದರು. ಹರೀಶ್ ಕೆ.ಎನ್.ಸ್ವಾಗತಿಸಿದರು. ಗುರುಪ್ರಸಾದ್ ಕೋಟೆಕಣಿ ಕಾರ್ಯಕ್ರಮ ನಿರೂಪಿಸಿದರು. ಪಿ.ದಿವಾಕರ ಅಶೋಕನಗರ ವಂದಿಸಿದರು. ನಂತರ ಭಜನೆ ನಡೆಯಿತು.
ಕಾರ್ಯಕ್ರಮ ಪೂರ್ವಭಾವಿಯಾಗಿ ನಗರದ ನೂತನ ಬಸ್ ನಿಲ್ದಾಣ ವಠಾರದಿಂದ ಶ್ರೀ ಅಯ್ಯಪ್ಪ ದೇಗುಲದ ವರೆಗೆ ಮಕ್ಕಳ ಕುಣಿತ ಭಜನೆ, ಸಮವಸ್ತ್ರಧಾರಿಗಳಾದ ತಾಯಂದಿರು, ಕಾರ್ಯಕರ್ತರನ್ನೊಳಗೊಂಡ ಭವ್ಯ ಮೆರವಣಿಗೆ ನಡೆಯಿತು.





