ಕಾಸರಗೋಡು: ಪ್ರಾಯೋಜಕರ ಹೆಸರಲ್ಲಿ ದೇವಸ್ವಂ ಮಂಡಳಿ ಮತ್ತು ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರ್ಕಾರ ಶಬರಿಮಲೆಯಲ್ಲಿ ದರೋಡೆಕೋರರ ತಂಡವನ್ನು ತಂದು ಕೂರಿಸಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ, ಬಿಜೆಪಿ ಮಾಜಿ ಕೇರಳ ರಾಜ್ಯಾಧ್ಯಕ್ಷ ವಿ. ಮುರಳೀಧರನ್ ಆರೋಪಿಸಿದ್ದಾರೆ.ಅವರು ಬಿಜೆಪಿ ಕಾಸರಗೋಡು ಜಿಲ್ಲಾ ಘಟಕ ಕಾಸರಗೋಡು ಹೊಸ ಬಸ್ನಿಲ್ದಾಣ ವಠಾರದಲ್ಲಿ ಆಯೋಜಿಸಿದ್ದ ಶಬರಿಮಲೆ ಸಂರಕ್ಷಣಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಕೋಟ್ಯಾಂತರ ರೂ ಬೆಲೆಬಾಳುವ ಶಬರಿಮಲೆಯ ಚಿನ್ನದ ಪಟ್ಟಿಗಳ ದುರಸ್ತಿಕಾರ್ಯಗಳಿಗೆ ಉಣ್ಣಿಕೃಷ್ಣನ್ ಪೆÇೀತ್ತಿಯಂತಹ ವ್ಯಕ್ತಿಗಳಿಗೆ ಯಾವ ಮಾನದಂಡದ ಆಧಾರದಲ್ಲಿ ಜವಾಬ್ದಾರಿ ವಹಿಸಿಕೊಟ್ಟಿದ್ದಾರೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕಾಗಿದೆ. ಪಿಣರಾಯಿ ವಿಜಯನ್ ಸರ್ಕಾರ ದೇಶದ ಕೋಟ್ಯಾಂತರ ಹಿಂದೂ ವಿಶ್ವಾಸಿಗಳನ್ನು ವಂಚಿಸಿದೆ. ತಪ್ಪೆಸಗದಿದ್ದಲ್ಲಿ, ವಿಶೇಷ ತನಿಖಾ ದಳದ ಮುಂಭಾಗ ತನಿಖೆಗೆ ಹಾಜರಾಗದೇ ದೇವಸ್ವಂ ಮಂಡಳಿ ಮಾಜಿ ಅಧ್ಯಕ್ಷ ಪದ್ಮಕುಮಾರ್ ಅವಿತುಕೊಳ್ಳುವ ಅವಶ್ಯಕತೆ ಏನಿದೆ ಪ್ರಶ್ನಿಸಿದರು.
ಭಕ್ತರ ಜೊತೆಗಿದ್ದೇವೆ ಎಂದು ನಾಟಕವಾಡುವ ಐಕ್ಯರಂಗ ಕೂಡಾ ಅವರ ಆಡಳಿತ ಕಾಲದಲ್ಲಿ ಶಬರಿಮಲೆಯ ಸೊತ್ತು ಅಪಹರಣಕ್ಕೆ ಕೈ ಜೋಡಿಸಿದೆ ಎಂದವರು ಆರೋಪಿಸಿದರು.
ಕಾಸರಗೋಡು ಜಿಲ್ಲೆ ರಚನೆಯಾಗಿ ನಾಲ್ಕು ದಶಕ ಸಂದರೂ ಜಿಲ್ಲೆಯ ಜನರ ಪ್ರಾಥಮಿಕ ಸಮಸ್ಯೆ, ಬೇಡಿಕೆ ಇಂದಿಗೂ ಪರಿಹಾರವಾಗಿಲ್ಲ. ಇದಕ್ಕೆ ಕೇರಳವನ್ನು ಅದಲುಬದಲಾಗಿ ಆಳ್ವಿಕೆ ನಡೆಸಿರುವ ಐಕ್ಯರಂಗ ಹಾಗೂ ಎಡರಂಗ ಕಾರಣವಾಗಿರುವುದಾಗಿ ಆರೋಪಿಸಿದರು.
ಬಿಜೆಪಿ ಜಿಲ್ಲಾ ಅಧ್ಯಕ್ಷೆ ಎಂ. ಎಲ್. ಅಶ್ವಿನಿ ಅಧ್ಯಕ್ಷತೆ ವಹಿಸಿದರು. ಬಿಜೆಪಿ ಕೇರಳಾ ಸೆಲ್ ಕೋರ್ಡಿನೇಟರ್ ವಿ. ಕೆ. ಸಜೀವನ್, ರಾಜ್ಯ ಸಮಿತಿ ಸದಸ್ಯ ವಿ. ರವೀಂದ್ರನ್, ಸತೀಶ್ಚಂದ್ರ ಭಂಡಾರಿ, ಸವಿತಾ ಟೀಚರ್, ಎ. ವೇಲಾಯುಧನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ಆರ್. ಸುನಿಲ್, ಎನ್ ಬಾಬುರಾಜ್, ಮನುಲಾಲ್ ಮೇಲತ್ತ್, ಜಿಲ್ಲಾ ಉಪಾಧ್ಯಕ್ಷ ಪಿ. ರಮೇಶ್ ಮೊದಲಾದವರು ಉಪಸ್ಥಿತರಿದ್ದರು.





