ಬದಿಯಡ್ಕ: ಕೇರಳದ ಚರಿತ್ರೆಯಲ್ಲಿ ಇದುವರೆಗೆ ದಾಖಲಾಗದ ಬಲುದೊಡ್ಡ ಕಳವು ಪ್ರಕರಣವನ್ನು ನಡೆಸುವ ಮೂಲಕ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರ್ಕಾರ ರಾಜ್ಯದ ಜನರನ್ನು ವಂಚಿಸಿದೆ. ಕೇರಳ ರಾಜ್ಯದಲ್ಲಿ ಭ್ರಷ್ಟಾಚಾರ, ಮೋಸ, ವಂಚನೆ ಅತಿಯಾಗಿದೆ ಎಂದು ಮಾಜಿ ವಿರೋಧ ಪಕ್ಷದ ನಾಯಕ ರಮೇಶ್ ಚೆನ್ನಿತ್ತಲ ಹೇಳಿದರು.
ಬದಿಯಡ್ಕ ಶ್ರೀ ಗುರುಸದನದಲ್ಲಿ ಶನಿವಾರ ಜರಗಿದ ಯುಡಿಎಫ್ ಬದಿಯಡ್ಕ ಪಂಚಾಯಿತಿ ಸಮಿತಿ ಚುನಾವಣಾ ಕನ್ವೆನ್ಶನ್ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ 10 ವರ್ಷಗಳಲ್ಲಿ ಎಡರಂಗ ಬೆಂಬಲಿತರಾದ 6 ಲಕ್ಷ ಮಂದಿಗೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನೇಮಕಾತಿಯನ್ನು ಮಾಡಿ ಜನದ್ರೋಹವನ್ನೆಸಗಿದೆ. ಕಾಸರಗೋಡು, ವಯನಾಡು ಮೆಡಿಕಲ್ ಕಾಲೇಜುಗಳ ಅವಸ್ಥೆ ಶೋಚನೀಯವಾಗಿದೆ. ಬಡಜನರ ಸಮಸ್ಯೆಗಳಿಗೆ ಪರಿಹಾರವನ್ನು ಕಾಣುವಲ್ಲಿ ಸರಕಾರವು ಸಂಪೂರ್ಣ ವಿಫಲವಾಗಿದೆ. ನೀರು ವಿದ್ಯುತ್, ಬಸ್ ಚಾರ್ಜ್ ಎಲ್ಲವೂ ಹೆಚ್ಚಳವಾಗಿದೆ. ಚುನಾವಣೆಯ ಸಂದರ್ಭದಲ್ಲಿ ಜನರ ಕಣ್ಣಿಗೆ ಮಣ್ಣೆರಚುವ ಕಾರ್ಯ ಎಲ್ಲೆಡೆ ನಡೆಯುತ್ತಿದೆ. ಪಿಣರಾಯಿ ಹಾಗೂ ಮೋದಿ ಸರ್ಕಾರದ ವಿರುದ್ಧ ಗೆಲುವನ್ನು ಸಾಧಿಸಿ ಬದಿಯಡ್ಕ ಗ್ರಾಮಪಂಚಾಯಿತಿ ಆಡಳಿತವನ್ನು ಉಳಿಸಿಕೊಳ್ಳಬೇಕು. ಬಿಜೆಪಿ ಹಾಗೂ ಎಡರಂಗದ ವಿರುದ್ಧ ಸಮರ್ಥ ಅಭ್ಯರ್ಥಿಗಳು ಕಣದಲ್ಲಿ ಗೆದ್ದು ಗ್ರಾಮಪಂಚಾಯಿತಿ ಆಡಳಿತದಲ್ಲಿ ವಿರೋಧಪಕ್ಷವೇ ಇಲ್ಲದಂತಾಗಬೇಕು ಎಂದರು.
ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕ ಎನ್.ಎ.ನೆಲ್ಲಿಕುನ್ನು ಸಮಾರಂಭದಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ಅನ್ವರ್ ಓಸೋನ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಗೋಪಕುಮಾರ್, ಶಾಂತಾ ಬಾರಡ್ಕ ನೀಲಕಂಠನ್ ನಾಯರ್, ಅಬ್ಬಾಸ್ ಎಂ., ಶ್ಯಾಮಪ್ರಸಾದ ಮಾನ್ಯ, ವಾಸುದೇವನ್ ನಾಯರ್, ತಿರುಪತಿ ಕುಮಾರ ಭಟ್, ಕಲ್ಲಟ್ರ ಮಾಹಿನ್ ಹಾಜಿ, ಪಿ.ಕೆ.ಫೈಸಲ್, ಟಿ.ಎಂ.ಶಹೀದ್, ಮಾಹಿನ್ ಕೇಳೋಟ್, ಶ್ರೀನಾಥ್ ಮೊದಲಾದವರು ಪಾಲ್ಗೊಂಡಿದ್ದರು. ನಾರಾಯಣ ಮಣಿಯಾಣಿ ನೀರ್ಚಾಲು ಸ್ವಾಗತಿಸಿದರು.





