HEALTH TIPS

ಕಾರು ಸ್ಫೋಟಕ್ಕೂ ಮುನ್ನ ರಾಮಲೀಲಾ ಮೈದಾನದ ಮಸೀದಿಯ ಬಳಿ ಕಾಣಿಸಿಕೊಂಡಿದ್ದ ಡಾ.ಉಮರ್!

ನವದೆಹಲಿ: ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಪ್ರಬಲ ಸ್ಫೋಟ ಪ್ರಕರಣದ ಪ್ರಮುಖ ಶಂಕಿತ ಆರೋಪಿ ಡಾ. ಉಮರ್ ನಬಿ, ರಾಮಲೀಲಾ ಮೈದಾನದ ಬಳಿಯ ಮಸೀದಿ ಎದುರು ನಡೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

'ಕಿರಿದಾದ ರಸ್ತೆಯಲ್ಲಿ ಉಮರ್ ನಬಿ ನೇರವಾಗಿ ನಡೆದುಕೊಂಡು ಹೋಗುವುದನ್ನು ಕಾಣಬಹುದಾಗಿದೆ.

ಇದೇ ವೇಳೆ ಆತ ಮುಖವನ್ನು ಬಲಕ್ಕೆ ತಿರುಗಿಸುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಸ್ಫೋಟ ನಡೆಸುವುದಕ್ಕೂ ಮುನ್ನ ಉಮರ್, ಮಸೀದಿಗೆ ಭೇಟಿ ನೀಡಿರುವ ಸಾಧ್ಯತೆ ಇದೆ' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನವೆಂಬರ್ 10ರಂದು (ಸೋಮವಾರ) ದೆಹಲಿಯ ಕೆಂಪುಕೋಟೆ ಮೆಟ್ರೊ ನಿಲ್ದಾಣದ ಸಮೀಪದ ಟ್ರಾಫಿಕ್ ಸಿಗ್ನಲ್‌ನಲ್ಲಿ ಕಾರು ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ 13 ಮಂದಿ ಮೃತಪಟ್ಟಿದ್ದು, 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

ಸ್ಫೋಟಗೊಂಡ ಕಾರನ್ನು ಓಡಿಸುತ್ತಿದ್ದ ಉಮರ್ ನಬಿ ಮಾಲೀಕತ್ವದ ಕೆಂಪು ಬಣ್ಣದ 'ಫೋರ್ಡ್‌ ಎಕೋಸ್ಪೋರ್ಟ್‌' ಕಾರನ್ನು ತೀವ್ರ ಶೋಧದ ಬಳಿಕ ಪತ್ತೆ ಮಾಡಿ ವಶಕ್ಕೆ ಪಡೆಯಲಾಗಿದೆ. ಫರೀದಾಬಾದ್‌ ಬಳಿ ಕಾರು ಪತ್ತೆಯಾಗಿದ್ದು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹುಂಡೈ ಐ20 ಕಾರಿನ ಜತೆಗೆ 'ಫೋರ್ಡ್‌ ಎಕೋಸ್ಪೋರ್ಟ್‌' ಕಾರನ್ನೂ ಸ್ಫೋಟಕ್ಕೆ ಬಳಸುವ ಸಂಚನ್ನು ಉಮರ್‌ ಮಾಡಿರಬಹುದು ಎಂಬ ಶಂಕೆಯಿದೆ. ಈ ದಿಸೆಯಲ್ಲಿಯೂ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಘಟನೆ ನಡೆದ ದಿನದಂದು ದೆಹಲಿಯಾದ್ಯಂತ ದಾಖಲಾಗಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಸ್ಫೋಟಕಗಳಿಂದ ತುಂಬಿದ್ದ ಐ20 ಕಾರನ್ನು ಉಮರ್ ಚಲಾಯಿಸುತ್ತಿದ್ದನೆಂದು ಶಂಕಿಸಲಾಗಿದೆ. ಸೋಮವಾರ ಸಂಜೆ 6.52ಕ್ಕೆ ಸ್ಫೋಟ ಸಂಭವಿಸಿತ್ತು. ಇದಕ್ಕೂ ಮುನ್ನ 3.19ಕ್ಕೆ ಉಮರ್ ಕಾರನ್ನು ಕೆಂಪುಕೋಟೆ ಬಳಿಯ ಸುನೇಹ್ರಿ ಮಸೀದಿ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ. ಬಳಿಕ 6:28ಕ್ಕೆ ಅಲ್ಲಿಂದ ಹೊರಟ್ಟಿದ್ದ. ಇದಾದ 24 ನಿಮಿಷಗಳ ಬಳಿಕ ಕೆಂಪುಕೋಟೆ ಮೆಟ್ರೊ ನಿಲ್ದಾಣದ ಸಮೀಪದ ಟ್ರಾಫಿಕ್ ಸಿಗ್ನಲ್‌ನಲ್ಲಿ ಕಾರು ಸ್ಫೋಟಗೊಂಡಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries