ಚೆನ್ನೈ: ಗ್ರೇಟರ್ ಚೆನ್ನೈ ಕಾರ್ಪೊರೇಷನ್ನ(ಜಿಸಿಸಿ) 31,000ಕ್ಕೂ ಹೆಚ್ಚು ನೈರ್ಮಲ್ಯ ಕಾರ್ಮಿಕರಿಗೆ ಉಚಿತ ಊಟ ನೀಡುವ ಯೋಜನೆಗೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಶನಿವಾರ ಚಾಲನೆ ನೀಡಿದ್ದಾರೆ.
ನಗರದಾದ್ಯಂತ ಜಿಸಿಸಿ ಒಡೆತನದ ಕಟ್ಟಡಗಳಲ್ಲಿ ಕೆಲಸ ಮಾಡುವ ನೈರ್ಮಲ್ಯ ಕಾರ್ಮಿಕರಿಗೆ ಅವರ ಪಾಳಿ ಸಮಯಕ್ಕೆ ಅನುಗುಣವಾಗಿ ಟಿಫಿನ್ ಬಾಕ್ಸ್ಗಳಲ್ಲಿ ಉಪಾಹಾರ, ಮಧ್ಯಾಹ್ನ ಅಥವಾ ರಾತ್ರಿ ಊಟವನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಡಿಸೆಂಬರ್ 6 ರಿಂದ ರಾಜ್ಯದ ಉಳಿದ 24 ಪಟ್ಟಣ ಪಂಚಾಯಿತಿ ಮತ್ತು 138 ಪುರಸಭೆಗಳಿಗೆ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದ್ದಾರೆ.
ಚೆನ್ನೈನಲ್ಲಿ 31,373 ನೈರ್ಮಲ್ಯ ಕಾರ್ಮಿಕರಿಗೆ ಪ್ರಯೋಜನವಾಗುವ ಈ ಯೋಜನೆಯನ್ನು ₹186 ಕೋಟಿ ವೆಚ್ಚದಲ್ಲಿ ಜಾರಿಗೆ ತರಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೈರ್ಮಲ್ಯ ಕಾರ್ಮಿಕರ ಅಚಲ ಬದ್ಧತೆ ಮತ್ತು ಸಮರ್ಪಣೆಗಾಗಿ ಅವರನ್ನು ಶ್ಲಾಘಿಸಿದ ಸ್ಟಾಲಿನ್, ಸರ್ಕಾರವು ಚೆನ್ನೈ ನಗರದ ಎಲ್ಲ 200 ವಾರ್ಡ್ಗಳಲ್ಲಿ ಶೌಚಾಲಯಗಳು ಮತ್ತು ಬಟ್ಟೆ ಬದಲಾಯಿಸಲು ಸ್ಥಳಾವಕಾಶದೊಂದಿಗೆ ವಿಶ್ರಾಂತಿ ಕೋಣೆಗಳನ್ನು ಸ್ಥಾಪಿಸಲಾಗುವುದು. ಇದು ನೈರ್ಮಲ್ಯ ಕಾರ್ಮಿಕರ ಪ್ರಮುಖ ಬೇಡಿಕೆಯಾಗಿದೆ ಎಂದು ತಿಳಿಸಿದ್ದಾರೆ.
'ನಾನು ಮಾತ್ರವಲ್ಲ, ಇಡೀ ಚೆನ್ನೈ ಪಾಲಿಕೆ ನಿಮ್ಮ ಸಮರ್ಪಿತ ಸೇವೆಗೆ ಋಣಿಯಾಗಿದೆ. ಹೊಸ ಯೋಜನೆಯು ಕಾರ್ಮಿಕರಿಗೆ ಪೌಷ್ಟಿಕ ಆಹಾರವನ್ನು ಒದಗಿಸುತ್ತದೆ. ಆಹಾರ ಬಿಸಿಯಾಗಿರಲು ಸ್ಟೀಲ್ ಲಂಚ್ ಬಾಕ್ಸ್ಗಳನ್ನು ನೀಡಲಾಗುವುದು'ಎಂದು ಸ್ಟಾಲಿನ್ ಹೇಳಿದ್ದಾರೆ.
ಕಲೈವಾನರ್ ಅರಂಗಂನಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಈ ಯೋಜನೆಯನ್ನು ಉದ್ಘಾಟಿಸಿದ ಸ್ಟಾಲಿನ್, ಚೆನ್ನೈ ಕಾರ್ಪೊರೇಷನ್ನ ಎಲ್ಲ 200 ವಾರ್ಡ್ಗಳಲ್ಲಿ ನೈರ್ಮಲ್ಯ ಕಾರ್ಮಿಕರಿಗಾಗಿ ವಿಶೇಷವಾದ 300 ಚದರ ಅಡಿಯ ವಿಶ್ರಾಂತಿ ಕೊಠಡಿಗಳು, ಬಟ್ಟೆ ಬದಲಾಯಿಸುವ ಕೊಠಡಿಗಳು ಮತ್ತು ಶೌಚಾಲಯಗಳನ್ನು ನಿರ್ಮಿಸಲಾಗುವುದು ಎಂದು ಘೋಷಿಸಿದರು.




