ಕುಂಬಳೆ: ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರದ ರಜತ ವರ್ಷಾಚರಣೆಯ ರಜತರಂಗ ಸರಣಿ ಕಾರ್ಯಕ್ರಮದ 8 ನೇ ಕಾರ್ಯಕ್ರಮ ಇತ್ತೀಚೆಗೆ ಕೈರಂಗಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘದ 72ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಡೆಯಿತು. ಇದರಂಗವಾಗಿ ಕೊಡಕ್ಕಲ್ಲು ಗೋಪಾಲಕೃಷ್ಣ ಹಾಸ್ಯಗಾರ ಸಂಸ್ಮರಣೆ ಮತ್ತು ತಾಳಮದ್ದಳೆ ನಡೆಯಿತು. ರಾಜಾರಾಮ ಹೊಳ್ಳ ಕೈರಂಗಳ ಸಂಸ್ಮರಣಾ ಭಾಷಣಗೈದು ಗುರುಗಳ ಜೊತೆಗಿನ ಅವಿಸ್ಮರಣೀಯ ಕ್ಷಣಗಳನ್ನು ನೆನಪಿಸಿದರು. ಕೊಡಕ್ಕಲ್ಲು ಗೋಪಾಲಕೃಷ್ಣ ಹಾಸ್ಯಗಾರರ ಸುಪುತ್ರ ರಾಘವೇಂದ್ರ ಭಟ್ ಮತ್ತು ಪುತ್ರಿ ಶೈಲಜಾ ಭಟ್ ಉಪಸ್ಥಿತರಿದ್ದು ಗೌರವಾರ್ಪಣೆಯನ್ನು ಸ್ವೀಕರಿಸಿದರು.
ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘ ಕೈರಂಗಳ ಇದರ ಅಧ್ಯಕ್ಷ ಚಂದ್ರಹಾಸ ಕಣಂತೂರು, ರಜತ ಸಮಿತಿಯ ಅಧ್ಯಕ್ಷ ಡಾ. ಹರಿಕಿರಣ ಬಂಗೇರ ಉಪಸ್ಥಿತರಿದ್ದರು. ಕೈರಂಗಳ ಯಕ್ಷಗಾನ ಸಂಘದ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ನಡೆಯಿತು. ಸುರೇಶ್ ಮಣಿಯಾಣಿ, ಕಿಶೋರ್ ಕೂಡ್ಲು, ವಿಫ್ನೇಶ್ ಕಾರಂತ, ಸುಜನ್ ಸಹಕರಿಸಿದರು. ಬಳಿಕ ನಡೆದ ವಾಮನ ಚರಿತ್ರೆ ತಾಳಮದ್ದಳೆಯಲ್ಲಿ ಹಿಮ್ಮೇಳದಲ್ಲಿ ಭಾಗವತರಾಗಿ ರಾಮ್ ಪ್ರಸಾದ್ ಮಯ್ಯ ಕೂಡ್ಲು, ಚೆಂಡೆ ಮದ್ದಳೆಯಲ್ಲಿ ಲಕ್ಷ್ಮೀಶ ಬೇಂಗ್ರೋಡಿ, ಶುಭಶರಣ ತಾಳ್ತಜೆ, ಮುಮ್ಮೇಳದಲ್ಲಿ ಹಿರಿಯರಾದ ಜಬ್ಬಾರ್ ಸಮೋ ಸಂಪಾಜೆ, ರಾಜಾರಾಮ ರಾವ್ ಮೀಯಪದವು, ಗುರುರಾಜ ಹೊಳ್ಳ ಬಾಯಾರು ಭಾಗವಹಿಸಿದರು.

.jpg)
.jpg)
