ಕಾಸರಗೋಡು: ರಾಜ್ಯ ಶಾಲಾ ಕಲೋತ್ಸವದಲ್ಲಿ ಆನ್ಲೈನ್ನಲ್ಲಿ ಭಾಗವಹಿಸಿ ಅದ್ಭುತ ಗೆಲುವು ಸಾಧಿಸಿದ ಸಿಯಾ ಫಾತಿಮಾ ಅವರಿಗೆ ಅವರ ಸಹಪಾಠಿಗಳು ಅಚ್ಚರಿಯ ಸ್ವಾಗತ ನೀಡಿ ಗಮನ ಸೆಳೆದಿರುವರು. ಸೋಮವಾರ ಬೆಳಿಗ್ಗೆ, ಸುಮಾರು 600 ವಿದ್ಯಾರ್ಥಿಗಳು ಶಾಲಾ ಮೈದಾನದಲ್ಲಿ ಒಟ್ಟುಗೂಡಿ ತಮ್ಮ ಪ್ರೀತಿಯ ಸ್ನೇಹಿತೆಗೆ 'ಧನ್ಯವಾದ'(ನನ್ನಿ) ಎಂಬ ಮಾನವ ರೂಪದಲ್ಲಿ ತಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸಿದರು. ಈ ವಿಶೇಷ ಗೌರವವನ್ನು ಪಡನ್ನ ವಿ.ಕೆ.ಪಿ. ಖಾಲಿದ್ ಹಾಜಿ ಸ್ಮಾರಕ ಮದರಸತುಲ್ ರಹಮಾನಿಯ ವೃತ್ತಿಪರ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದರು.
10 ನೇ ತರಗತಿಯ ವಿದ್ಯಾರ್ಥಿನಿ ಸಿಯಾ ಫಾತಿಮಾ ವ್ಯಾಸ್ಕುಲೈಟಿಸ್ ಎಂಬ ಅಪರೂಪದ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾಳೆ. ದೇಹದ ರೋಗನಿರೋಧಕ ವ್ಯವಸ್ಥೆಯು ರಕ್ತನಾಳಗಳ ಮೇಲೆ ದಾಳಿ ಮಾಡುವ ಈ ರೋಗವು ತೀವ್ರ ನೋವು ಮತ್ತು ಸೋಂಕನ್ನು ಉಂಟುಮಾಡುತ್ತದೆ. ಜಿಲ್ಲಾ ಕಲೋತ್ಸವದಲ್ಲಿ ಅರೇಬಿಕ್ ಪೋಸ್ಟರ್ ವಿನ್ಯಾಸದಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಜಿಯಾ ರಾಜ್ಯ ಮಟ್ಟಕ್ಕೆ ಅರ್ಹತೆ ಪಡೆದಿದ್ದಳು. ಆದಾಗ್ಯೂ, ಚಿಕಿತ್ಸೆಯ ಭಾಗವಾಗಿ ಆಕೆಯ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುವ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರಿಂದ, ವೈದ್ಯರು ಕಟ್ಟುನಿಟ್ಟಾದ ಕ್ವಾರಂಟೈನ್ ಮತ್ತು ಪ್ರಯಾಣ ನಿಯಂತ್ರಣ ಸೂಚಿಸಿದ್ದರು.
ಇತಿಹಾಸವನ್ನು ಬದಲಿಸಿದ ಸಚಿವರ ನೆರವು:
ಸ್ವತಃ ಕಲಿತ ಕ್ಯಾಲಿಗ್ರಫಿಯ ಮೂಲಕ ಶ್ರೇಷ್ಠ ಕಲಾವಿದೆಯಾದ ಸಿಯಾ, ಆ ಅವಕಾಶವನ್ನು ಕಳೆದುಕೊಳ್ಳಲು ಸಿದ್ದರಿರಲಿಲ್ಲ. ಕೊನೆಗೆ, ಶಿಕ್ಷಣ ಸಚಿವ ವಿ. ಶಿವನ್ಕುಟ್ಟಿ ಅವರಿಗೆ ತಮ್ಮ ಪರಿಸ್ಥಿತಿಯನ್ನು ವಿವರಿಸುವ ವಾಟ್ಸಾಪ್ ಸಂದೇಶವನ್ನು ಕಳುಹಿಸಿದ್ದಳು. ಸಚಿವರು, ಸಿಯಾ ಅವರ ವಿನಂತಿಯನ್ನು ಪರಿಗಣಿಸಿ, ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ವಿಶೇಷ ಆದೇಶವನ್ನು ನೀಡಿದ್ದರು. ಕೇರಳ ಶಾಲಾ ಕಲೋಲ್ಸವ 63 ವರ್ಷಗಳ ಇತಿಹಾಸದಲ್ಲಿ ವಿದ್ಯಾರ್ಥಿಯೊಬ್ಬರಿಗೆ ಇಂತಹ ಅವಕಾಶ ಸಿಕ್ಕಿರುವುದು ಇದೇ ಮೊದಲು. ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಸಿಯಾ ಎ ಗ್ರೇಡ್ ಗಳಿಸಿದಳು.
ಈ ಹಿನ್ನೆಲೆಯಲ್ಲಿ ಸೋಮವಾರ ಶಾಲೆ, ಜಿಲ್ಲೆಗೆ ಕೀರ್ತಿ ತಂದ ತಮ್ಮ ಸಹಪಾಠಿಗೆ ಕೃತಜ್ಞತೆ ಸಲ್ಲಿಸಲು ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮವನ್ನು ಆಯೋಜಿಸಿದರು
ಶಿಕ್ಷಣ ಸಚಿವ ವಿ. ಶಿವನ್ಕುಟ್ಟಿ, ಶಿಕ್ಷಣ ಇಲಾಖೆ, ಸಾರ್ವಜನಿಕ ಪ್ರತಿನಿಧಿಗಳು ಮತ್ತು ಸಿಯಾ ಫಾತಿಮಾ ಅವರ ಬೆಂಬಲಕ್ಕೆ ನಿಂತ ಕೇರಳದ ಜನರಿಗೆ ಈ ಅಭಿನಂದನೆ ಎಮದು ವಿದ್ಯಾರ್ಥಿಗಳು ಹೇಳಿಕೊಂಡಿರುವರು. ಈ ಮಾನವ ರೂಪದ ಅಭಿನಂದನಾ ಪರಿಕಲ್ಪನೆ ಪ್ರಾಂಶುಪಾಲ ಎಂ.ಸಿ. ಶಿಹಾಬ್ ಅವರದ್ದಾಗಿತ್ತು. ಜುನೈದ್ ಮೊಟ್ಟಮ್ಮಾಳ್ ನೃತ್ಯ ಸಂಯೋಜನೆ ಮಾಡಿದ್ದಾರೆ.
"ಕಾನೂನಿನ ಕಠೋರತೆಯ ಮೇಲೆ ಮಾನವೀಯತೆ ಜಯಗಳಿಸಿದ ಕ್ಷಣ ಅದು. ಸರ್ಕಾರ ಅವಳ ಕಣ್ಣೀರು ಮತ್ತು ಕನಸುಗಳನ್ನು ನಿರ್ಲಕ್ಷಿಸಲಿಲ್ಲ. ಇದು ಅವಳಲ್ಲಿರುವ ಕಲಾವಿದೆಗೆ ಹೊಸ ಜೀವ ನೀಡುತ್ತದೆ" ಎಂದು ಪ್ರಾಂಶುಪಾಲ ಎಂ.ಸಿ. ಶಿಹಾಬ್ ಹೇಳಿದ್ದಾರೆ. ಇಡೀ ಶಾಲೆಯು ಅವಳ ಬೆಂಬಲಕ್ಕೆ ನಿಂತಿದೆ ಮತ್ತು ಜಿಯಾ ಅವರ ಪೋಷಕರಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿದೆ ಎಂದು ಅವರು ಹೇಳಿದ್ದಾರೆ.

.jpg)
.jpg)
