ಬದಿಯಡ್ಕ: ನಾಲಂದ ಮಹಾವಿದ್ಯಾಲಯದ 2025- 26 ನೇ ಸಾಲಿನ ಎನ್ನೆಸ್ಸೆಸ್ ವಾರ್ಷಿಕ ಶಿಬಿರವು ಏತಡ್ಕ ಶಾಲೆಯಲ್ಲಿ ಸಮಾಪನಗೊಂಡಿತು. ನಾಲಂದ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ. ಜಯಗೋವಿಂದ ಉಕ್ಕಿನಡ್ಕ ಅಧ್ಯಕ್ಷತೆ ವಹಿಸಿ, ಸಪ್ತದಿನ ಶಿಬಿರಗಳು ವಿದ್ಯಾರ್ಥಿಗಳಿಗೆ ಸಮಾಜದೊಂದಿಗೆ ಬೆರೆಯಲು ಮತ್ತು ಜೀವನ ಪಾಠಗಳನ್ನು ಕಲಿಯಲು ಒಂದು ಸದವಕಾಶ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕುಂಬ್ಡಾಜೆ ಗ್ರಾಮ ಪಂಚಾಯತಿ ಏತಡ್ಕ ವಾರ್ಡ್ ಸದಸ್ಯರು ಮತ್ತು ಶಿಬಿರದ ಸಂಘಟಕ ಸಮಿತಿಯ ಕನ್ವೀನರ್ ನಯನ ಪಿ ಅವರು ಅತಿಥಿಗಳಾಗಿ ಭಾಗವಹಿಸಿದ್ದರು. ಸಪ್ತದಿನ ಶಿಬಿರದ ಸಂಘಟಕ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಕೆ.ಕೆ, ಕಾಲೇಜು ಪ್ರಾಂಶುಪಾಲ ಶಂಕರ ಖಂಡಿಗೆ, ಏತಡ್ಕ ಶಾಲೆಯ ಮುಖ್ಯೋಪಾಧ್ಯಾಯ ರಾಜಾರಾಮ ಕುಂಜಾರು, ವಿವಿಧ ಕುಟುಂಬಶ್ರೀಯ ಸದಸ್ಯರು ಉಪಸ್ಥಿತರಿದ್ದರು.
ಅಶ್ವಿನಿ ಕೆ.ಬಿ. 7 ದಿನ ಶಿಬಿರದ ವರದಿ ವಾಚಿಸಿದರು. ಯೋಜನಾಧಿಕಾರಿ ವರ್ಷಿತ್ ಕೆ ಶ್ರಮದಾನದ ವರದಿಯನ್ನು ಪಂಚಾಯತಿ ಸದಸ್ಯರಿಗೆ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಸ್ವಯಂಸೇವಕಿ ಪ್ರಜ್ಞಾ ಸ್ವಾಗತಿಸಿ, ಎನ್ನೆಸ್ಸೆಸ್ ಯೋಜನಾಧಿಕಾರಿ ವರ್ಷಿತ್ ಕೆ. ವಂದಿಸಿದರು. ಸ್ವಯಂಸೇವಕಿಯರಾದ ಅನಘಾ ಮತ್ತು ಭವ್ಯಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು.

.jpg)
.jpg)
