ನವದೆಹಲಿ: ಅಲೋಪಥಿ ವೈದ್ಯರಂತೆ ಆಯುಷ್ ವೈದ್ಯರನ್ನು 'ನೋಂದಾಯಿತಿ ವೃತ್ತಿಪರ ವೈದ್ಯರು' ಎಂದು ಘೋಷಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ಕುರಿತು ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಕಾನೂನು, ಆರೋಗ್ಯ ಮತ್ತು ಆಯುಷ್ ಸಚಿವಾಲಯಗಳಿಗೆ ಸೋಮವಾರ ಸೂಚಿಸಿದೆ.
ನಿರ್ದಿಷ್ಟ ವೈದ್ಯಕೀಯ ಪ್ರಕರಣಗಳಲ್ಲಿ ಔಷಧಗಳ ಜಾಹೀರಾತುಗಳನ್ನು ನಿಯಂತ್ರಿಸುವ 1954ರ ಕಾನೂನಿನ ಷೆಡ್ಯೂಲ್ ಅನ್ನು ಪ್ರಸ್ತುತ ಸನ್ನಿವೇಶಕ್ಕೆ ತಕ್ಕಂತೆ ಪರಿಶೀಲಿಸಿ, ಸುಧಾರಿಸಲು ತಜ್ಞರ ಸಮಿತಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಕಾನೂನು ವಿದ್ಯಾರ್ಥಿ ನಿತಿನ್ ಉಪಾಧ್ಯಾಯ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದಾರೆ.
ನಿತಿನ್ ಅವರ ತಾಯಿಯೂ ಆದ ವಕೀಲೆ ಅಶ್ವಿನಿ ಉಪಾಧ್ಯಾಯ ಅವರ ವಾದವನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್ಮಾಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು, ಪಿಐಎಲ್ ಆಧರಿಸಿ ನೋಟಿಸ್ ಜಾರಿ ಮಾಡಿದೆ.
'ನಿತಿನ್ ನಿಮ್ಮ ಮಗನೇ?' ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಅಶ್ವಿನಿ ಅವರನ್ನು ಕೇಳಿದರು.
'ಹೌದು' ಎಂದು ಅಶ್ವಿನಿ ಉತ್ತರಿಸಿದರು.
'ಅವನಿಗೆ ಚಿನ್ನದ ಪದಕ ಸಿಗುತ್ತದೆ ಎಂದು ನಾವು ಭಾವಿಸಿದ್ದೆವು. ಆದರೆ, ಅವನು ಈಗ ಪಿಐಎಲ್ಗಳನ್ನು ಸಲ್ಲಿಸುತ್ತಿದ್ದಾನೆ. ನೀವು ಈಗ ಏಕೆ ಅಧ್ಯಯನ ಮಾಡಬಾರದು? ನಿಮ್ಮ ಮಗನಿಗಷ್ಟೇ ಒಂದು ನೋಟಿಸ್ ಕೊಡಿ. ಇದರಿಂದ ಅವನು ಚೆನ್ನಾಗಿ ಓದುವಂತಾಗಲಿ' ಎಂದು ಪೀಠವು ಸೂಚಿಸಿದೆ.

